ನವದೆಹಲಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಇಂದು ಗ್ರಾಮದಲ್ಲಿರುವ ಆಸ್ತಿ-ಪಾಸ್ತಿಗೆ ಸಂಬಂಧಿಸಿದಂತೆ 'ಸ್ವಾಮಿತ್ವ ಯೋಜನೆ'ಯನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ದೇಶಾದ್ಯಂತ ಇರುವ ಗ್ರಾಮ ಪಂಚಾಯ್ತಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸುದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಘೋಷಣೆ ಮಾಡಿದ್ದಾರೆ. ಬಳಿಕ ಈ ಯೋಜನೆಯ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಮೋದಿ ಗ್ರಾಮದಲ್ಲಿರುವ ಆಸ್ತಿ-ಪಾಸ್ತಿಗಳ ಕುರಿತು ನಿರಂತರ ಕಲಹಗಳು ಕೇಳಿಬರುತ್ತವೆ. ಅವುಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದೇ ಈ ಎಲ್ಲ ವ್ಯಾಜ್ಯಗಳಿಗೆ ಕಾರಣ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಇನ್ಮುಂದೆ ಸ್ವಾಮಿತ್ವ ಯೋಜನೆಯ ಅಡಿ ಡ್ರೋನ್ ಗಳ ಸಹಾಯದಿಂದ ದೇಶದ ಪ್ರತಿ ಗ್ರಾಮಗಳಲ್ಲಿರುವ ಭೂಮಿಯ ಮ್ಯಾಪಿಂಗ್ ಅನ್ನು ಡ್ರೋನ್ ಮಾಡಲಾಗುವುದು. ಬಳಿಕ ಆ ಭೂಮಿಯ ಮಾಲೀಕರಿಗೆ ಅದರ ಮಾಲೀಕತ್ವದ ಪ್ರಮಾಣಪತ್ರ ನೀಡಲಾಗುವುದು. ಅಷ್ಟೇ ಅಲ್ಲ ಈ ಮೊದಲು ಗ್ರಾಮದಲ್ಲಿರುವ ಭೂಮಿಗಳ ಮೇಲೆ ಬ್ಯಾಂಕ್ ಲೋನ್ ನೀಡಲಾಗುತ್ತಿರಲಿಲ್ಲ. ಈ ಯೋಜನೆ ಜಾರಿಗೆ ಬರುತ್ತಿದ್ದಂತೆ ನಾಗರಿಕರು ತಮ್ಮ ಗ್ರಾಮದ ಆಸ್ತಿ-ಪಾಸ್ತಿಗಳ ಮೇಲೂ ಕೂಡ ಸಾಲವನ್ನು ಪಡೆಯಬಹುದಾಗಿದೆ ಮತ್ತು ಇದು ಈ ಯೋಜನೆಯ ಅತಿ ದೊಡ್ಡ ಲಾಭ ಎಂದು ಪ್ರಧಾನಿ ಬಣ್ಣಿಸಿದ್ದಾರೆ.


COMMERCIAL BREAK
SCROLL TO CONTINUE READING

ಗ್ರಾಮಗಳ ಸಾಮಾಜಿಕ ಜೀವನದ ಮೇಲೆ ಈ ಯೋಜನೆ ದೊಡ್ಡ ಪರಿಣಾಮ ಬೀರಲಿದೆ ಎಂಬುದನ್ನು ಇದೀಗ ನಿರೀಕ್ಷಿಸಲಾಗುತ್ತಿದೆ. ಈ ರೀತಿ ಬ್ಯಾಂಕ್ ಗಳಿಂದ ಸಾಲ ಪಡೆದು ಅನೇಕ ನಾಗರಿಕರಿಗೆ ಈ ಯೋಜನೆ ತಮ್ಮ ಸ್ವಂತ ವ್ಯವಸಾಯ ಅಥವಾ ಉದ್ಯೋಗ ಆರಂಭಿಸಲು ಸಹಕರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಸದ್ಯ ಈ ಯೋಜನೆಯನ್ನು ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಹಾಗೂ ಕರ್ನಾಟಕ ಸೇರಿದಂತೆ ದೇಶದ ಒಟ್ಟು 6 ರಾಜ್ಯಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಆರಂಭಿಸಲಾಗುತ್ತಿದ್ದು, ಯೋಜನೆಯ ಸಾಧಕ-ಬಾಧಕಗಳ ಅಧ್ಯಯನ ನಡೆಸಿ ಈ ಯೋಜನೆಯನ್ನು ದೇಶದ ಇತರೆ ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದೂ ಕೂಡ ಪ್ರಧಾನಿ ಮೋದಿ ಹೇಳಿದ್ದಾರೆ.


ಇದೇ ವೇಳೆ ದೇಶಾದ್ಯಂತ ಇರುವ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುತ್ತಿರುವ ಭೃಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಮತ್ತು ಗ್ರಾಮ ಪಂಚಾಯ್ತಿಗಳ ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇ-ಗ್ರಾಮ ಸ್ವರಾಜ್ ಪೋರ್ಟಲ್ ಹಾಗೂ ಆಪ್ ಅನ್ನೂ ಸಹ ಬಿಡುಗಡೆಗೊಳಿಸಲಾಗಿದೆ. ಈ ಆಪ್ ಹಾಗೂ ಪೋರ್ಟಲ್ ಸಹಾಯದಿಂದ ಯಾವುದೇ ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಲಾಗಿರುವ ಆರ್ಥಿಕ ಸಹಾಯ ಹಾಗೂ ಅದರ ವೆಚ್ಚದ ಕುರಿತು ಗ್ರಾಮಸ್ತರು ಮಾಹಿತಿ ಪಡೆಯಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಎವರಡೂ ಗ್ರಾಮಸ್ಥರ ಪಾಲಿಗೆ ದೊಡ್ಡ ವರದಾನವಾಗಿ ಸಾಬೀತಾಗಳಿವೆ ಎಂದು ಪ್ರಧಾನಿ ಇದೇ ವೇಳೆ ಹೇಳಿದ್ದಾರೆ.