ಮಾಸ್ಕೋ:ಲಡಾಖ್‌ನ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎಸ್ -400 ಅನ್ನು ಶೀಘ್ರದಲ್ಲೇ ತಲುಪಿಸುವುದಾಗಿ ರಷ್ಯಾ ಭಾರತಕ್ಕೆ ಭರವಸೆ ನೀಡಿದೆ. ರಷ್ಯಾ ಪ್ರವಾಸದಲ್ಲಿ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಸಂದರ್ಭದಲ್ಲಿ ರಷ್ಯಾದ ಉಪ ಪ್ರಧಾನಿ ಯೂರಿ ಇವನೊವಿಕ್ ಬೋರಿಸೊವ್ ಈ ಬಗ್ಗೆ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಭಾರತಕ್ಕೆ ಹೊಸ ಶಸ್ತ್ರಾಸ್ತ್ರಗಳನ್ನು ನೀಡದಂತೆ ರಷ್ಯಾಕ್ಕೆ ಮನವಿ ಮಾಡಿತ್ತು. ಆದರೆ ರಷ್ಯಾ ಚೀನಾದ ಮನವಿಯನ್ನು ಧಿಕ್ಕರಿಸಿದೆ.


COMMERCIAL BREAK
SCROLL TO CONTINUE READING

ಸಭೆಯ ಬಳಿಕ ಮಾತನಾಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸಹಕಾರವಿದೆ ಮತ್ತು ಭಾರತದೊಂದಿಗಿನ ಒಪ್ಪಂದವು ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ರಷ್ಯಾ ಭರವಸೆ ನೀಡಿದೆ ಎಂದಿದ್ದಾರೆ"  ಅಷ್ಟೇ ಅಲ್ಲ "ರಷ್ಯಾದ ಉಪ ಪ್ರಧಾನ ಮಂತ್ರಿಯೊಂದಿಗಿನ ನನ್ನ ಸಂಭಾಷಣೆ ತುಂಬಾ ಸಕಾರಾತ್ಮಕವಾಗಿತ್ತು. ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ನಮ್ಮ ದ್ವಿಪಕ್ಷೀಯ ಸಂಬಂಧಗಳು ಗಟ್ಟಿಯಾಗಿವೆ. ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮುಂದುವರಿಸಲಾಗುವುದು ಎಂದು ನನಗೆ ಭರವಸೆ ಇದೆ. ಇದು ಮಾತ್ರವಲ್ಲ, ಅನೇಕ ವಿಷಯಗಳಲ್ಲಿ ಇವು ತುಂಬಾ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂಬ ಭರವಸೆ ನನಗೆ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.


5 ಬಿಲಿಯನ್ ಡಾಲರ್ ನೀಡಿ 5 ಎಸ್-400 ವ್ಯವಸ್ಥೆಯನ್ನು ಭಾರತ ಖರೀದಿಸುತ್ತಿದೆ
ರಷ್ಯಾದ ಪತ್ರಿಕೆ ಸ್ಪುಟ್ನಿಕ್ ನ್ಯೂಸ್‌ನ ವರದಿಯ ಪ್ರಕಾರ, ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಮೊದಲೇ ನೀಡುವಂತೆ ಭಾರತ ಸರ್ಕಾರ ಕೋರಿತ್ತು ಮತ್ತು ರಷ್ಯಾ ಇದಕ್ಕೆ ಸಮ್ಮತಿಸಿದೆ. 2018 ರಲ್ಲಿ ಭಾರತ ಮತ್ತು ರಷ್ಯಾ ನಡುವೆ ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಎಸ್ -400 ಖರೀದಿಯ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದರೆ ಈ ವ್ಯವಸ್ಥೆಯ ಒಟ್ಟು ಐದು ಘಟಕಗಳಲ್ಲಿ 5 ಬಿಲಿಯನ್ ಡಾಲರ್ ಅಂದರೆ ಸರಿ ಸುಮಾರು 40 ಸಾವಿರ ಕೋಟಿಗೆ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ ಭಾರತವು ರಷ್ಯಾದಿಂದ 31 ಫೈಟರ್ ಜೆಟ್‌ಗಳನ್ನು ಖರೀದಿಸುತ್ತಿದೆ. ಟಿ -90 ಟ್ಯಾಂಕ್‌ನ ಪ್ರಮುಖ ಬಿಡಿ ಭಾಗಗಳ ಬಗ್ಗೆಯೂ ಕೂಡ ಭಾರತ ರಷ್ಯಾದೊಂದಿಗೆ ಮಾತುಕತೆ ನಡೆಸಿದೆ.


ಕರೋನಾ ವೈರಸ್ ಹಿನ್ನೆಲೆ 2021 ರ ಡಿಸೆಂಬರ್ ವೇಳೆಗೆ ಎಸ್ -400 ಪೂರೈಕೆ ಮಾಡುವುದಾಗಿ ರಷ್ಯಾ ಹೇಳಿತ್ತು. ಫೆಬ್ರವರಿಯಲ್ಲಿ, ರಷ್ಯಾದ ಕೈಗಾರಿಕಾ ಸಚಿವ ಡೆನಿಸ್ ಮಾಂಟುರೊವ್ ಭಾರತಕ್ಕಾಗಿ ಎಸ್ -400 ತಯಾರಿಕೆಯ ಕಾರ್ಯ ಆರಂಭವಾಗಿದೆ ಎಂದು ಘೋಷಿಸಿದ್ದರು. ಭಾರತ ಮತ್ತು ರಷ್ಯಾ ತಲ್ವಾರ್ ಶ್ರೇಣಿಯ ಫ್ರೀಗೇಟ್, ನೌಕಾಪಡೆಯ ಹೆಲಿಕಾಪ್ಟರ್‌ಗಳಿಗೆ ಒಪ್ಪಂದ ಮಾಡಿಕೊಂಡಿವೆ. ಇದಕ್ಕೂ ಮೊದಲು ಚೀನಾ ತನ್ನ ಮೌತ್ ಪೀಸ್  ಪೀಪಲ್ಸ್ ಡೈಲಿ ಮೂಲಕ ರಷ್ಯಾಕ್ಕೆ ಈ 'ಸೂಕ್ಷ್ಮ' ಕಾಲದಲ್ಲಿ ಭಾರತಕ್ಕೆ ಹೊಸ ಶಸ್ತ್ರಾಸ್ತ್ರಗಳನ್ನು ನೀಡಬಾರದು ಎಂದು ಮನವಿ ಮಾಡಿತ್ತು.