ನವದೆಹಲಿ: COVID- 19 ಹಿನ್ನಲೆಯಲ್ಲಿ ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು (Parliament Mansoon Session) ಹೇಗೆ ನಡೆಸಬೇಕೆಂಬ ಬಗ್ಗೆ ಹಲವಾರು ಸಾಧ್ಯತೆಗಳನ್ನು ಅನ್ವೇಷಿಸಿದ ನಂತರ ಲೋಕಸಭೆ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರು ಶಿಫ್ಟ್ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ 23ಕ್ಕೆ ಸಂಸತ್ತಿನ ಅಧಿವೇಶನವನ್ನು (Parliament Session) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಸಂಸತ್ತಿನ ನಿಯಮಾವಳಿ ಪ್ರಕಾರ 6 ತಿಂಗಳೊಳಗೆ ಮತ್ತೆ ಅಧಿವೇಶನ ನಡೆಸಬೇಕು. ಹಾಗಾಗಿ  ಈಗ ಸೆಪ್ಟೆಂಬರ್ 22ರೊಳಗೆ ಅಧಿವೇಶನ ನಡೆಸಲೇಬೇಕಾಗಿದೆ. ಹಾಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಧಿವೇಶನ ಕರೆಯುವ ಸಾಧ್ಯತೆ ಇದೆ.


ಆದರೆ COVID- 19 ಹಿನ್ನಲೆಯಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು (Parliament Mansoon Session) ಹೇಗೆ ನಡೆಸಬೇಕೆಂಬುದು ಸವಾಲಾಗಿದೆ. ಈ‌ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿಗಳಾದ ಎಂ.‌ ವೆಂಕಯ್ಯನಾಯ್ಡು (M. Venkaiahnidu) ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವಾರು ಸಾಧ್ಯತೆಗಳನ್ನು ಅನ್ವೇಷಿಸಿದ ಬಳಿಕ ಶಿಫ್ಟ್ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.


ಶಿಫ್ಟ್ ಎಂದರೆ ಲೋಕಸಭೆ ಮತ್ತು ರಾಜ್ಯಸಭೆಯು ಬೆಳಿಗ್ಗೆ ಮತ್ತು ಸಂಜೆ ಪಾಳಿಗಳಂತೆ ನಡೆಯುವುದು. ಅಥವಾ ಒಂದು ದಿನ ಲೋಕಸಭೆ ಒಂದು ದಿನ ರಾಜ್ಯಸಭಾ ಕಲಾಪ ನಡೆಸುವುದು. ಈ ಎರಡೂ ಮಾದರಿಗಳ ಪೈಕಿ ಒಂದರಂತೆ ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು (Parliament Mansoon Session) ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.


ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸಬೇಕಿರುವುದರಿಂದ ಲೋಕಸಭೆಯ 542 ಸದಸ್ಯರ ಪೈಕಿ 168 ಸದಸ್ಯರನ್ನು ಲೋಕಸಭೆಯಲ್ಲಿ, ಕೆಲವರನ್ನು ಗ್ಯಾಲರಿಯಲ್ಲಿ, ಇನ್ನು ಕೆಲವರನ್ನು ರಾಜ್ಯಸಭೆಯಲ್ಲಿ, ಮತ್ತೆ ಕೆಲವರನ್ನು ರಾಜ್ಯಸಭಾ ಗ್ಯಾಲರಿಯಲ್ಲಿ ಕೂರಿಸಲಾಗುತ್ತದೆ. ರಾಜ್ಯಸಭೆಯ 241 ಸದಸ್ಯರಿಗೂ ಇದೇ ರೀತಿಯ ಆಸನದ ವ್ಯವಸ್ಥೆಯನ್ನು ವರ್ಗೀಕರಿಸಲಾಗುತ್ತದೆ ಎನ್ನಲಾಗಿದೆ.


ಪ್ರತಿಯೊಬ್ಬ ಸದಸ್ಯರಿಗೆ ತಮ್ಮ ಆಸನಗಳಲ್ಲಿ ಮೈಕ್ರೊಫೋನ್ ಇರುತ್ತದೆ. ಪ್ರತಿಯೊಂದು ಹಸ್ತಕ್ಷೇಪ ಮತ್ತು ಹೇಳಿಕೆಯನ್ನು ಕೋಣೆಗಳು ಮತ್ತು ಗ್ಯಾಲರಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಯಾವ ಸಂಸದರು ಕುಳಿತುಕೊಳ್ಳುತ್ತಾರೆ ಎಂಬುದನ್ನು ಸದನಗಳಲ್ಲಿನ ವಿವಿಧ ಪಕ್ಷಗಳ ಬಲವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.