ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ (ನವೆಂಬರ್ 22) ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ಸಿನವರದು ಅವಕಾಶವಾದಿ ಮೈತ್ರಿಕೂಟ ಎಂದು ಬಣ್ಣಿಸಿದರು ಮತ್ತು ಈ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ  ಸ್ಥಿರವಾದ ಸರ್ಕಾರವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

"ಇದು (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್) ಅವಕಾಶವಾದದ ಮೈತ್ರಿ, ಅವರಿಗೆ ಮಹಾರಾಷ್ಟ್ರಕ್ಕೆ ಸ್ಥಿರವಾದ ಸರ್ಕಾರವನ್ನು ನೀಡಲು ಸಾಧ್ಯವಾಗುವುದಿಲ್ಲ" ಎಂದು ನಿತಿನ್ ಗಡ್ಕರಿ ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. 


ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಹಿಂದುತ್ವದ ಸಿದ್ಧಾಂತವನ್ನು ಆಧರಿಸಿದೆ ಮತ್ತು "ಇಂದಿಗೂ ನಮಗೆ ಹೆಚ್ಚು ಸೈದ್ಧಾಂತಿಕ ವ್ಯತ್ಯಾಸಗಳಿಲ್ಲ" ಎಂದು ಅವರು ಹೇಳಿದರು. ಅಂತಹ ಮೈತ್ರಿಯನ್ನು ಮುರಿಯುವುದು ದೇಶಕ್ಕೆ ಮಾತ್ರವಲ್ಲ, ಹಿಂದುತ್ವ ಕಾರಣಕ್ಕೂ ಮಹಾರಾಷ್ಟ್ರಕ್ಕೂ ನಷ್ಟವಾಗಿದೆ ಎಂದು ಗಡ್ಕರ್ ಹೇಳಿದರು.


ಈ ಹಿಂದೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಮುಖಂಡರು ಇತರ ಮಿತ್ರ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು. ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸರ್ಕಾರ ರಚನೆ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಅಂತಿಮ ಹಂತ ತಲುಪಿದೆ ಎಂದು ನಂಬಲಾಗಿದೆ.


ರಾಜ್ಯದಲ್ಲಿ ಸರ್ಕಾರ ರಚಿಸಲು ಎಲ್ಲಾ ಪಕ್ಷಗಳು ವಿಫಲವಾದ ಹಿನ್ನೆಲೆಯಲ್ಲಿ ನವೆಂಬರ್ 12 ರಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರವನ್ನು ರಚಿಸುವ ಹಕ್ಕನ್ನು ಪಡೆಯಲು ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಮಿತ್ರ ಶಿವಸೇನೆ ಮುಖ್ಯಮಂತ್ರಿ ಹುದ್ದೆ ಹಾಗೂ ಕ್ಯಾಬಿನೆಟ್ ಸ್ಥಾನಗಳ ಸಮಾನ ಹಂಚಿಕೆಗೆ ಪಟ್ಟು ಹಿಡಿದಿತ್ತು. ಬಿಜೆಪಿ ಮಿತ್ರ ಪಕ್ಷದ ಷರತ್ತಿಗೆ ಒಪ್ಪದ ಕಾರಣ ಶಿವಸೇನೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿತು.


ಸರ್ಕಾರ ರಚಿಸುವ ಮಾರ್ಗಗಳನ್ನು ಅನ್ವೇಷಿಸಲು ಶಿವಸೇನೆ ಬಿಜೆಪಿಯೊಂದಿಗೆ ಬೇರ್ಪಟ್ಟಿದೆ. ಆದರೆ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನೀಡಿದ ಸಮಯದಲ್ಲಿ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲವನ್ನು ಸಾಬೀತುಪಡಿಸುವಲ್ಲಿ ಅದು ವಿಫಲವಾಗಿದೆ.


ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯ ಸಂಖ್ಯಾಬಲವನ್ನು ಸಾಬೀತುಪಡಿಸಲು ರಾಜ್ಯಪಾಲರು ಮೂರನೇ ಅತಿದೊಡ್ಡ ಪಕ್ಷವಾದ ಎನ್‌ಸಿಪಿಯನ್ನು ಆಹ್ವಾನಿಸಿದ್ದರು. ಅದಾಗ್ಯೂ ಅವರಿಗೆ ನೀಡಿದ್ದ ಸಮಯ ಮಿತಿಗೂ ಮೊದಲೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು.


ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ಈಗ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮಾತುಕತೆ ನಡೆಸುತ್ತಿದೆ.