ನವದೆಹಲಿ : ಆಂಧ್ರಪ್ರದೇಶಕ್ಕೆ 'ವಿಶೇಷ ಸ್ಥಾನಮಾನ'ಕ್ಕೆ ಒತ್ತಾಯಿಸಿ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ಚಿತ್ತೂರ್ ಸಂಸದ ನರಮಲ್ಲಿ ಶಿವಪ್ರಸಾದ್ ಸೃಜನಾತ್ಮಕ ವೇಷಭೂಷಣಗಳೊಂದಿಗೆ ಪ್ರತಿಭಟನೆಗೆ ವಿಭಿನ್ನ ರೂಪ ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ನಡೆಯನ್ನು ವಿರೋಧಿಸಿ, ಸಂಸತ್ತಿನ ಆವರಣದಲ್ಲಿ 'ವಿಶ್ವಾಮಿತ್ರ'ನ ಅವತಾರದಲ್ಲಿ ಪ್ರತಿಭಟನೆ ನಡೆಸಿದರು.  


ಈ ಹಿಂದೆ ಮಹಿಳೆ, ದನಕಾಯುವ ಹುಡುಗ, ನಾರದ ಮುನಿ, ಪರಶುರಾಮನ ವೇಷಭೂಷಣಗಳನ್ನು ತೊಟ್ಟು ಟಿಡಿಪಿ ನಡೆಸಿದ್ದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಸಂಸದ ಶಿವಪ್ರಸಾದ್, ಇಂದು ವಿಶ್ವಾಮಿತ್ರನ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. 


ವೃತ್ತಿಯಲ್ಲಿ ವೈದ್ಯರಾಗಿರುವ ನರಮಲ್ಲಿ ಶಿವಪ್ರಸಾದ್ ಈಗಾಗಲೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1999 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಚಂದ್ರಬಾಬು ನಾಯ್ಡು ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.


ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೆ ಇರುವ ಕೇಂದ್ರದ ವಿರುದ್ಧ ಫೆ.1ರಂದು ಬಜೆಟ್ ಅಧಿವೇಶನ ಆರಂಭವಾದ ದಿನದಿಂದ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.