ನ್ಯೂಯಾರ್ಕ್: ಭಯೋತ್ಪಾದನೆಯನ್ನು ಎದುರಿಸಲು ಪಾಕಿಸ್ತಾನದ ಪ್ರಯತ್ನಗಳ ಬಗ್ಗೆ ತನ್ನ ನಿಲುವು ಬದಲಾಗಿಲ್ಲ ಎಂದು ಭಾರತ ಪುನರುಚ್ಚರಿಸಿದ್ದು, ಅಪಾಯವನ್ನು ನಿಭಾಯಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಸ್ಲಾಮಾಬಾದ್(ಪಾಕಿಸ್ತಾನ) ಅನ್ನು ಒತ್ತಾಯಿಸಿದೆ. "ಈ ವಿಷಯವನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ನಮ್ಮ ನಿಲುವಿನ ಬಗ್ಗೆ ಈ ಹಿಂದೆ ಉತ್ತರಿಸಲಾಗಿದೆ, ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ" ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.


COMMERCIAL BREAK
SCROLL TO CONTINUE READING

ಪಾಕಿಸ್ತಾನದೊಂದಿಗಿನ ಮಾತುಕತೆಯಿಂದ ಭಾರತ ದೂರ ಸರಿಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಮುನ್ನ ಪಾಕಿಸ್ತಾನ ತನ್ನ ದೇಶದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪಿಎಂ ಮೋದಿ ಈ ಹೇಳಿಕೆ ನೀಡಿದ್ದಾರೆ.


"ನಾವು ಪಾಕಿಸ್ತಾನದೊಂದಿಗಿನ ಮಾತುಕತೆಯಿಂದ ದೂರ ಸರಿಯುತ್ತಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸ್ಪಷ್ಟಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅದಕ್ಕೂ ಮೊದಲು ಪಾಕಿಸ್ತಾನವು ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಆದರೆ ಈ ಕುರಿತಂತೆ ಪಾಕಿಸ್ತಾನದ ಯಾವುದೇ ಪ್ರಯತ್ನಗಳನ್ನು ನಾವು ಕಾಣುತ್ತಿಲ್ಲ" ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.


ಕಳೆದ 30 ವರ್ಷಗಳಿಂದ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ದನಿ ಎತ್ತಿದೆ ಎಂದು ಗೋಖಲೆ ಹೇಳಿದರು. ತನ್ನ ಮಣ್ಣಿನಿಂದ ಹೊರಹೊಮ್ಮುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೆ ಪಾಕಿಸ್ತಾನದೊಂದಿಗೆ ಸಂವಾದವನ್ನು ಪ್ರಾರಂಭಿಸಲಾಗುವುದಿಲ್ಲ ಎಂದು ಭಾರತ ಪದೇ ಪದೇ ಸಮರ್ಥಿಸಿಕೊಂಡಿದೆ.


ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಮತ್ತು ತೃತೀಯ ಮಧ್ಯಸ್ಥಿಕೆಗೆ ಯಾವುದೇ ಅವಕಾಶವಿಲ್ಲ ಎಂಬ ಕಾಶ್ಮೀರ ವಿಷಯದ ಬಗ್ಗೆ ಭಾರತದ ನಿಲುವನ್ನು ಕುಮಾರ್ ಪುನರುಚ್ಚರಿಸಿದರು. "ನಿನ್ನೆ ಸಹ, ಅವರು (ಟ್ರಂಪ್) ಭಾರತ ಮತ್ತು ಪಾಕಿಸ್ತಾನಗಳೆರಡೂ ಯಾವುದೇ ರೀತಿಯ ಮಧ್ಯಸ್ಥಿಕೆಗೆ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ, ಇದನ್ನು ಪ್ರಧಾನಿ ಮೊದಲೇ ಸ್ಪಷ್ಟಪಡಿಸಿದ್ದಾರೆ" ಎಂದು ಗೋಖಲೆ ಹೇಳಿದ್ದಾರೆ.


ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ  ನಿರ್ಧಾರಗಳನ್ನು ಅನುಸರಿಸಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಪಾಕಿಸ್ತಾನವು ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಿದೆ ಮತ್ತು ಈ ಕ್ರಮದ ನಂತರ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಕಾಶ್ಮೀರದ ಕುರಿತ ತನ್ನ ಸಾಂವಿಧಾನಿಕ ನಿರ್ಧಾರಗಳು ಅದರ ಆಂತರಿಕ ವಿಷಯ ಎಂದು ಭಾರತವು ಸಮರ್ಥಿಸಿಕೊಂಡಿದೆ - ಈ ನಿಲುವನ್ನು ವಿಶ್ವದ ಹಲವು ದೇಶಗಳು ಬೆಂಬಲಿಸಿವೆ.