ಪಾಟ್ನಾ : ಕೊವಿಡ್ ಕರಾಳ ಛಾಯೆ (COVID-19 )ಆವರಿಸಿರುವಂತೆಯೆ, ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ವೇದಿಕೆ ಸಜ್ಜಾಗಿದೆ. ಬುಧವಾರ ಮೊದಲ ಹಂತದ ಚುನಾವಣೆಯ ಮತದಾನ ನಡೆಯಲಿದೆ, 243 ವಿಧಾನ ಸಭಾ ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳ ಮತದಾರರು 1066 ಅಭ್ಯರ್ಥಿಗಳ ಮತ ಭವಿಷ್ಯ ಬರೆಯಲಿದ್ದಾರೆ.


COMMERCIAL BREAK
SCROLL TO CONTINUE READING

ಕರೋನಾ ಎದುರಿಸಲು ಕಟ್ಟುನಿಟ್ಟಿನ ಕ್ರಮ:


ಕರೊನಾ ಮಹಾಮಾರಿಯ ಭೀತಿಯ ನಡುವೆಯೇ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಸುರಕ್ಷಿತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕರೋನಾ ಹಿನ್ನೆಲೆಯಲ್ಲಿ ಪ್ರತಿ ಬೂತಿನ ಗರಿಷ್ಠ ಮತದಾರರ ಸಂಖ್ಯೆ 1600 ರಿಂದ 1000ಕ್ಕೆ ಇಳಿಸಲಾಗಿದೆ. ಮತದಾನಕ್ಕೆ ಒಂದು ಗಂಟೆ ಹೆಚ್ಚಿನ ಅವಧಿ ನೀಡಲಾಗಿದೆ.80 ವರ್ಷಕ್ಕಿಂತ ಅಧಿಕ ವಯೋಮಾನವದವರಿಗೆ ಅಂಚೆ ಮತದ ಸೇವೆ ಕಲ್ಪಿಸಲಾಗಿದೆ.ಇವೆಲ್ಲದರ ನಡುವೆ, ಮತಯಂತ್ರಗಳ ಸಾನಿಟೈಶೇಷನ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್ ಸಾನಿಟೈಸರ್, ಸಾಬೂನು ಮತ್ತು ನೀರು ಇತ್ಯಾದಿಗಳನ್ನು ಮತಗಟ್ಟೆಗಳಲ್ಲಿ ಒದಗಿಸಲಾಗಿದೆ.


ಹಕ್ಕು ಚಲಾಯಿಸಲಿದ್ದಾರೆ 2.14 ಕೋಟಿ ಮತದಾರರು


ಬುಧವಾರ 2.14 ಕೋಟಿ ಮತದಾರರು (voters) ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರಲ್ಲಿ 1.01 ಕೋಟಿ ಮಹಿಳಾ ಮತದಾರರಾಗಿದ್ದಾರೆ. ಅಭ್ಯರ್ಥಿಗಳ ಪೈಕಿ 952 ಮಂದಿ ಪುರುಷರು ಹಾಗೂ 114 ಮಂದಿ ಮಹಿಳೆಯರು ಕಣದಲ್ಲಿದ್ದಾರೆ. ಗಯಾ ಕ್ಷೇತ್ರದಲ್ಲಿ ಅತ್ಯಧಿಕ 27 ಅಭ್ಯರ್ಥಿಗಳು ಹಾಗೂ ಬಂಕಾ ಜಿಲ್ಲೆಯ ಕಟೊರಿಯಾದಲ್ಲಿ ಅತಿಕಡಿಮೆ ಅಂದರೆ ಕೇವಲ ಐವರು ಅಭ್ಯರ್ಥಿಗಳಿದ್ಧಾರೆ.


ಪಕ್ಷಗಳ ಸ್ಪರ್ಧೆ ಎಲ್ಲೆಲ್ಲಿ ಗೊತ್ತಾ..?


ಇನ್ನೂ ಪಾರ್ಟಿಗಳ ವಿಚಾರಕ್ಕೆ ಬರುವುದಾದರೆ, ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯು (JDU) 71 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ, ಅದರ ಮಿತ್ರ ಪಕ್ಷ ಬಿಜೆಪಿ (BJP) 29 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇನ್ನು ಮಹಾಘಟಬಂಧನ್ ವಿಚಾರಕ್ಕೆ ಬರುವುದಾದರೆ, ಆರ್ ಜೆಡಿ (RJD) 42 ಕ್ಷೇತ್ರಗಳಲ್ಲಿ ಅದರ ಮಿತ್ರ ಪಕ್ಷ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ತನ್ನ ಅದೃಷ್ಟ ಪರೀಕ್ಷಿಸುತ್ತಿದೆ.ಜೆಡಿಯು ಸ್ಪರ್ಧಿಸಿರುವ 35 ಕ್ಷೇತ್ರಗಳನ್ನೂ ಒಳಗೊಂಡಂತೆ, ಒಟ್ಟು 41 ಕ್ಷೇತ್ರಗಳಲ್ಲಿ ಎಲ್ ಜೆಪಿ ಕಣಕ್ಕಿಳಿದಿದೆ.


ಮರು ಆಯ್ಕೆ ಬಯಸಿರುವ ಆರು ಮಂದಿ ಸಚಿವರು..!


ನಿತೀಶ್ ಸಂಪುಟದ ಆರು ಮಂದಿ ಸಚಿವರಾದ ಪ್ರೇಮ್ ಕುಮಾರ್ -ಗಯಾ ನಗರ, ವಿಜಯ ಕುಮಾರ್ ಸಿನ್ಹಾ- ಲಖಿ ಸರಾಯಿ, ರಾಮ್ ನಾರಾಯಣ್ ಮಂಡಲ್ – ಬಂಕಾ, ಕೃಷ್ಣಾನಂದನ್ ಪ್ರಸಾದ್ ವರ್ಮಾ – ಜೆಹನಾಬಾದ್, ಜೈಕುಮಾರ್ ಸಿಂಗ್ – ದಿನಾರಾ ಮತ್ತು ಸಂತೋಷ್ ಕುಮಾರ್ ನಿರಾಲ–ರಾಜಪುರ್ ದಿಂದ ಮರು ಆಯ್ಕೆ ಬಯಸಿದ್ದಾರೆ.