ಶ್ರೀನಗರ: ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾದ ನಂತರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಅನಂತ್‌ನಾಗ್‌ನ ವಾನ್‌ಪೋ ಪ್ರದೇಶದಲ್ಲಿ ಬೆಳಿಗ್ಗೆ ಗಸ್ತು ತಿರುಗುತ್ತಿದ್ದಾಗ ಭದ್ರತಾ ಪಡೆಗಳು ಐಇಡಿ(IED) ಪತ್ತೆ ಹಚ್ಚಿವೆ. ನಂತರ ಇದನ್ನು ಬಾಂಬ್ ವಿಲೇವಾರಿ ದಳದಿಂದ ಪರಿಶೀಲಿಸಲಾಯಿತು. ಇದರಿಂದಾಗಿ ನಡೆಯಬೇಕಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.



ಹೆದ್ದಾರಿಯಲ್ಲಿ ಭಾರೀ ಸ್ಫೋಟ ನಡೆಸುವ ಉದ್ದೇಶದಿಂದ ಭಯೋತ್ಪಾದಕರು ಈ ಐಇಡಿಯನ್ನು ಅಡಗಿಸಿಟ್ಟಿದ್ದರು ಎಂದು ಶಂಕಿಸಲಾಗಿದೆ. ಶ್ರೀನಗರದಿಂದ ಜಮ್ಮುವಿಗೆ ಹೋಗುವ ವಾಹನಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಏಕಮುಖ ಸಂಚಾರಕ್ಕೆ ಮುಕ್ತವಾಗಿತ್ತು.


ಉಗ್ರರು ಮತ್ತೆ ಗುಂಪು ಸೇರಲು ಯತ್ನಿಸುತ್ತಿದ್ದಾರೆ ಎಂಬ ವರದಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.