ನವದೆಹಲಿ: ಯುಎಸ್ "ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತದ ನಿರ್ಧಾರ 'ಆಂತರಿಕ ವಿಷಯ' ಎಂದು ಯುಎಸ್ ವಿವರಿಸಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮೋರ್ಗನ್ ಒರ್ಟಾಗಸ್ ಅವರ ಹೇಳಿಕೆಯು ಯುಎಸ್ "ಬಂಧನಗಳ ವರದಿಗಳ ಬಗ್ಗೆ ಕಾಳಜಿ ವಹಿಸಿದೆ" ಎಂದು ಹೇಳಿದರು.


COMMERCIAL BREAK
SCROLL TO CONTINUE READING

“ನಾವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನವನ್ನು ಪರಿಷ್ಕರಿಸುವ ಭಾರತದ ಘೋಷಣೆ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಭಾರತದ ಯೋಜನೆಯನ್ನು ನಾವು ಗಮನಿಸುತ್ತೇವೆ”ಎಂದು ಮೋರ್ಗನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.


"ನಾವು ಬಂಧನಗಳ ವರದಿಗಳ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ವೈಯಕ್ತಿಕ ಹಕ್ಕುಗಳ ಗೌರವ ಮತ್ತು ಪೀಡಿತ ಸಮುದಾಯಗಳಲ್ಲಿರುವವರೊಂದಿಗೆ ಚರ್ಚಿಸಲು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.


ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪಾಕಿಸ್ತಾನಕ್ಕೆ ನೀಡಿದ ಸಂದೇಶದಲ್ಲಿ, "ಎಲ್ಲರೂ ನಿಯಂತ್ರಣ ರೇಖೆಯ ಉದ್ದ(LoC)ಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು" ಕೇಳಿದೆ.


ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ 370 ನೇ ವಿಧಿಯನ್ನು ರದ್ದುಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರದ ಘೋಷಣೆಯ ಬಗ್ಗೆ ಪಾಕಿಸ್ತಾನವು ಅಸಮಾಧಾನ ವ್ಯಕ್ತಪಡಿಸಿದೆ. 


ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ,  "ಈ ಅಂತರರಾಷ್ಟ್ರೀಯ ವಿವಾದದಲ್ಲಿ ಪಾಕಿಸ್ತಾನವೂ ಸಹ ಒಂದು ಪಕ್ಷವಾಗಿರುವುದರಿಂದ ಈ ಕಾನೂನುಬಾಹಿರ ನಿರ್ಧಾರಗಳ ವಿರುದ್ಧ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪಾಕಿಸ್ತಾನವು ಕಾಶ್ಮೀರಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 


ಅಷ್ಟೇ ಅಲ್ಲದೆ ಇಸ್ಲಾಮಾಬಾದ್ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರನ್ನು ಕರೆದು ವಿಶ್ವಸಂಸ್ಥೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ನಿರ್ಣಯಿಸಬೇಕೆಂದು ಒತ್ತಾಯಿಸಿದೆ.


ಆದಾಗ್ಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಅನುಮತಿಸದ ಕಾರಣ 370 ನೇ ವಿಧಿಯನ್ನು ರದ್ದುಪಡಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ಆರ್ಟಿಕಲ್ 370 ಅನ್ನು ಈ ಪ್ರದೇಶದಲ್ಲಿ "ಭಯೋತ್ಪಾದನೆಯ ಮೂಲ" ಎಂದು ಅವರು ಬಣ್ಣಿಸಿದ್ದಾರೆ. ಅವರನ್ನು ಬೆಂಬಲಿಸಿದ ಪ್ರಧಾನಿ ಮೋದಿ, ಷಾ "ಹಿಂದಿನ ಅನ್ಯಾಯಗಳನ್ನು ನಿಖರವಾಗಿ ಎತ್ತಿ ತೋರಿಸಿದ್ದಾರೆ" ಎಂದು ಹೇಳಿದರು.


ಜಮ್ಮು ಮತ್ತು ಕಾಶ್ಮೀರವನ್ನು ನೈಜ ಅರ್ಥದಲ್ಲಿ ಭಾರತಕ್ಕೆ ಸಂಪೂರ್ಣವಾಗಿ ಸಂಯೋಜಿಸಲು 370 ನೇ ವಿಧಿಯನ್ನು ರದ್ದುಪಡಿಸುವುದು ಅತ್ಯಗತ್ಯ ಎಂದು ಸರ್ಕಾರ ಹೇಳಿದೆ.


ಕಾನೂನು ಸುವ್ಯವಸ್ಥೆ ಕಾಪಾಡಲು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿಡಲಾಯಿತು. ಶ್ರೀನಗರದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಫ್ತಿಗೆ ನೀಡಿದ ಆದೇಶದಲ್ಲಿ 'ಕಾನೂನು ಸುವ್ಯವಸ್ಥೆ ಮತ್ತು ಕಾಶ್ಮೀರದಲ್ಲಿ ಶಾಂತಿ ಉಲ್ಲಂಘನೆಯ ಬಗ್ಗೆ ಬಲವಾದ ಆತಂಕಗಳಿವೆ' ಎಂದು ಬರೆಯಲಾಗಿದೆ. "ನಿಮ್ಮ ಚಟುವಟಿಕೆಗಳು ಶಾಂತಿಯ ಉಲ್ಲಂಘನೆಗೆ ಕಾರಣವಾಗಬಹುದು, ನಿಮ್ಮ ಇತ್ತೀಚಿನ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಂಡು ಅದು ಗಂಭೀರ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಉಲ್ಲಂಘನೆಗೆ ಕಾರಣವಾಗಬಹುದು" ಎಂದು ತಿಳಿಸಿದೆ.