ಜಾರ್ಖಂಡ್: ನಾಟಕ ನೋಡಲು ತೆರಳಿದ್ದ ಮಹಿಳೆಯನ್ನು ಎಳೆದೊಯ್ದ ಆಕೆಯ ಮಾಜಿ ಗಂಡ ಮತ್ತು ಇತರ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. 


COMMERCIAL BREAK
SCROLL TO CONTINUE READING

ಜಾರ್ಖಂಡ್ ನ ಜಮ್ತರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಕಾಳಿ ಪೂಜೆಯಂದು ಏರ್ಪಡಿಸಿದ್ದ ನಾಟಕ ಪ್ರದರ್ಶನ ನೋಡಲು ತೆರಳಿದ್ದ ಮಹಿಳೆಯನ್ನು ಆಕೆಯ ಮಾಜಿ ಗಂಡ ಮತ್ತು ಆತನ ಇಬ್ಬರು ಸ್ನೇಹಿತರು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆಯ ವಯ್ಯಕ್ತಿಕ ಭಾಗಕ್ಕೆ ಕೋಲುಗಳನ್ನು ತುರುಕಿ ಹಿಂಸೆ ನೀಡಿ, ಘಾಸಿಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


ಬೆಳಗಿನ ಜಾವ ಮಹಿಳೆಯ ರೋಧನೆ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು, ಕೂಡಲೇ ಆಕೆಯನ್ನು ನಾರಾಯಣಪುರಂ ಪಟ್ಟಣದ ಜಮ್ತಾರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.


ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಮಹಿಳೆ ಸಾಯುವ ಮುನ್ನ ಆಕೆಯ ಮಾಜಿ ಗಂಡ ಮತ್ತು ಇನ್ನಿಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಮಹಿಳೆಯ ಮಾಜಿ ಗಂಡನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.