Karnataka Elections 2023: ಸಭೆಯ ಮೇಲೆ ಸಭೆ.. ಒಬ್ಬರಾದ ಮೇಲೆ ಇನ್ನೊಬ್ಬರ ಭೇಟಿ.. ಮೊನ್ನೆ ಹೋಯ್ತು, ನಿನ್ನೆ ಕಳೆಯಿತು ಆದರೂ ಹೊರಬರಲಿಲ್ಲ ಬಿಜೆಪಿಯ ಮೊದಲ ಪಟ್ಟಿ. ಸದ್ಯ ಪ್ರತಿಯೊಬ್ಬರ ಚಿತ್ತ ದೆಹಲಿಯತ್ತ ನೆಟ್ಟಿದೆ. ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಂತೂ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಮೂರ್ನಾಲ್ಕು ದಿನಗಳಿಂದ ಮಾತುಕತೆ ನಡೆಯುತ್ತಿದ್ದರೂ ಇನ್ನೂ ಮೊದಲ ಪಟ್ಟಿಯೇ ಬಿಡುಗಡೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯು ಭಾನುವಾರ ಮುಕ್ತಾಯಗೊಂಡ ನಂತರ ಸೋಮವಾರ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ನಾಯಕರು ತಿಳಿಸಿದ್ದರು. ಪಕ್ಷದ ಪ್ರಧಾನ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಿಇಸಿಯ ಇತರ ಸದಸ್ಯರು ಭಾಗವಹಿಸಿದ್ದರು. ಆದರೂ ನಿನ್ನೆ ಲಿಸ್ಟ್‌ ಮಾತ್ರ ರಿಲೀಸ್‌ ಆಗಲಿಲ್ಲ. 


COMMERCIAL BREAK
SCROLL TO CONTINUE READING

ಪಿಟಿಐ ವರದಿಯ ಪ್ರಕಾರ, ಸಭೆಯ ನಂತರ, ಪಿಎಂ ಮೋದಿ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ ಮತ್ತು ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಶಿಕಾರಪುರ ವಿಧಾನಸಭಾ ಕ್ಷೇತ್ರದಿಂದ, ಚಿಕ್ಕಮಗಳೂರಿನಿಂದ ಸಿಟಿ ರವಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ ಎಂದು ಹೇಳಲಾಗ್ತಿದೆ. 


ಇದನ್ನೂ ಓದಿ: ಚುನಾವಣಾ ಕರ್ತವ್ಯ ಲೋಪ; ಹೆಸ್ಕಾಂ ಅಭಿಯಂತರರನ್ನು ಅಮಾನತ್ತುಗೊಳಿಸಿದ ಜಿಲ್ಲಾಧಿಕಾರಿ


ಪಕ್ಷವು ಸರಿಸುಮಾರು 90 ಬಿಜೆಪಿ ಶಾಸಕರನ್ನು ಮರು ಆಯ್ಕೆ ಮಾಡಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಪಕ್ಷದ ಕೋರ್ ಕಮಿಟಿ ಪ್ರತಿ ಅಸೆಂಬ್ಲಿ ಸ್ಥಾನಕ್ಕೆ ಮೂವರು ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ, ಅದನ್ನು ಸಿಇಸಿ ಮುಂದೆ ಇರಿಸಲಾಯಿತು, ನಂತರ ಪಕ್ಷದ ಕೇಂದ್ರ ನಾಯಕರು ಅಭ್ಯರ್ಥಿಗಳನ್ನು ಫೈನಲ್‌ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.


ಶನಿವಾರ, ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಸಂಸದೀಯ ಮಂಡಳಿ ಸಭೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕರ್ನಾಟಕದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಮತ್ತು ಪಕ್ಷದ ಇತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. 


ಕೇಸರಿ ಪಾಳಯದಲ್ಲಿ ಟಿಕೆಟ್‌ ಹಂಚಿಕೆ ಇಷ್ಟೊಂದು ಜಟಿಲವಾಗಿರುವುದೇಕೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಈಗಾಗಲೇ ಕಾಂಗ್ರೆಸ್‌ ಎರಡು ಪಟ್ಟಿ ಬಿಟುಗಡೆ ಮಾಡಿದೆ, ಆದರೆ ಬಿಜೆಪಿ ಇನ್ನೂ ಮೊದಲ ಪಟ್ಟಿಯನ್ನೂ ರಿಲೀಸ್‌ ಮಾಡಿಲ್ಲ. ಬಿಜೆಪಿ ಮೊದಲ ಪಟ್ಟಿ ಇಂದಾದರೂ ಹೊರ ಬೀಳುತ್ತಾ? ಕಾದು ನೋಡಬೇಕಿದೆ.


ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಪ್ರಸ್ತುತ ಕರ್ನಾಟಕ ವಿಧಾನಸಭೆಯ ಅವಧಿ ಈ ವರ್ಷ ಮೇ 24 ರಂದು ಕೊನೆಗೊಳ್ಳಲಿದೆ. 


ಇದನ್ನೂ ಓದಿ: ಬಿಜೆಪಿ ಚುನಾವಣಾ ಮ್ಯಾಪ್ ಸಿದ್ದ ಎಂದ ಸಿಎಂ ಬೊಮ್ಮಾಯಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.