ಬೆಳಗಾವಿ: ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ, ಕೋವಿಡ್, ಗುತ್ತಿಗೆಯಲ್ಲಿ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸತ್ತರೂ ಪ್ರಧಾನಮಂತ್ರಿಗಳಿಂದ ಉತ್ತರ ಇಲ್ಲ. ಈ ಭ್ರಷ್ಟ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ನಿಮ್ಮ ಭವಿಷ್ಯದ ಗತಿ ಏನು? ಎಲ್ಲದಕ್ಕೂ ಲಂಚ ನೀಡುವುದಾದರೆ ಪರಿಶ್ರಮಕ್ಕೆ ಬೆಲೆ ಏನು? ರೈತ ಲಂಚ ನೀಡಲಾಗಿದೆ ತನ್ನ ಎತ್ತುಗಳನ್ನು ನೀಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ ಎಂದು ನೀವೇ ಆಲೋಚಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನನ್ನ ಮತ್ತು‌ ನನ್ನ ಸಂಬಂಧಿಕರ ಮನೆ ಮೇಲೆ ರೇಡ್ ಮಾಡುವ ಹುನ್ನಾರ ನಡೆದಿದೆ"


ಅವರು ಖಾನಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು


ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಸಮಯ. ನಾನು ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಹೀಗಾಗಿ ಎಲ್ಲಾ ಪಕ್ಷಗಳ ಮುಖಂಡರು ನಿಮ್ಮ ಬಳಿ ಬಂದು ಅವರ ವಿಚಾರಧಾರೆ ನಿಮಗೆ ನಿಮ್ಮ ಮುಂದೆ ಇಡುತ್ತಾರೆ.ನೀವು ಎಲ್ಲರ ಮಾತನ್ನೂ ಗಮನದಲ್ಲಿಟ್ಟುಕೊಂಡು ಕೇಳಿ. ಕರ್ನಾಟಕದಲ್ಲಿ ಎಲ್ಲವೂ ಇದೆ. ತನ್ನದೇ ಆದ ಪುರಾತನ ಸಂಸ್ಕೃತಿ, ಪರಂಪರೆ, ಮಹಾನ್ ನಾಯಕರು, ಪ್ರಕೃತಿ ವರದಾನ, ಪ್ರಾಕೃತಿಕ ಸಂಪತ್ತು ಎಲ್ಲವೂ ಇವೆ. ಈ ಭಾಗದ ಯುವಕರು ಶಿಕ್ಷಿತರಾಗಿದ್ದು, ಭವಿಷ್ಯದ ಭಾಗಿದಾರರಾಗುವ ಸಾಮರ್ಥ್ಯ ನಿಮಗೆ ಇದೆ ಎಂದು ಹೇಳಿದರು.


ಬೆಂಗಳೂರಿನಲ್ಲಿ ಅನೇಕ ತಂತ್ರಜ್ಞಾನ ಕಂಪನಿಗಳು, ಅತಿ ಹೆಚ್ಚು ಉದ್ಯೋಗಿಗಳು, ಶಿಕ್ಷಿತರು ಇದ್ದು, ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಲಾಗಿದೆ.ನಾನು ವಿದೇಶಕ್ಕೆ ಹೋದಾಗ ಅಲ್ಲಿ ಅನೇಕ ಕನ್ನಡಿಗರು ಸಿಗುತ್ತಾರೆ. ಅವರು ಅಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ವಿದೇಶಕ್ಕೆ ಹೋದಾಗ ಅಲ್ಲಿ ಅವರನ್ನು ಭೇಟಿ ಆದಾಗ ನನ್ನ ದೇಶದ ಜನರ ಸಾಧನೆ ನೋಡಿ ನನಗೆ ಹೆಮ್ಮೆಯಾಗುತ್ತದೆ. ಈ ಪ್ರದೇಶ ಮಹಾನ್ ಪ್ರದೇಶವಾಗಿದ್ದು, ಈ ಪ್ರದೇಶ ಅತ್ಯಂತ ಪ್ರಗತಿ ಸಾಧಿಸಬಹುದು. ಆದರೆ ಇಲ್ಲಿರುವ ಸರ್ಕಾರಕ್ಕೆ ಅದರ ಅರಿವಾಗಿಲ್ಲ ಎಂದು ಹೇಳಿದರು.


ಎರಡು ರೀತಿಯ ಸರ್ಕಾರ ನೋಡಬಹುದು. ಒಂದು ಸರ್ಕಾರ ಜನರ ಬಳಿ ಹೋಗಿ ಅವರ ಕಷ್ಟ ಅರಿತು ಅವರಿಗೆ ಪರಿಹಾರ ನೀಡುತ್ತದೆ. ಮತ್ತೊಂದು ರೀತಿಯ ಸರ್ಕಾರ ಜನರ ಬಗ್ಗೆ ಕಾಳಜಿ ತೋರುವುದಿಲ್ಲ. ಅಧಿಕಾರ ಸಿಗುತ್ತಿದ್ದಂತೆ ಹಣ ಮಾಡಲು ಮುಂದಾಗುತ್ತಾರೆ. ಅವರು ಜನರಿಗೆ ಉತ್ತರ ನೀಡುವುದಿಲ್ಲ, ನಾವು ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಗೆ ಹೋಗುತ್ತಾರೆ. ಕರ್ನಾಟಕದಲ್ಲಿ ಮೂರೂವರೆ ವರ್ಷಗಳ ಹಿಂದೆ ಇಂತಹುದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.


ಇದನ್ನೂ ಓದಿ: ಖಾನಾಪುರ ಕೈ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಪರ ಪ್ರಿಯಾಂಕಾ ಪ್ರಚಾರ


ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರದ ನಿಯತ್ತು ಆರಂಭದಲ್ಲೇ ಹಾಳಾಗಿತ್ತು. ಇದರಿಂದ ಆಡಳಿತ ಕುಸಿಯಿತು. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ.ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಇನ್ನು ದೇಶದಲ್ಲಿ ಬೆಲೆ ಏರಿಕೆ ಎಗ್ಗಿಲ್ಲದೆ ಸಾಗಿದೆ. ಅಡುಗೆ ಸಿಲಿಂಡರ್ 1100 ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಿಎಸ್ ಟಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಸಂಸಾರ ನಿಭಾಯಿಸುವುದು ಬಹಳ ಕಷ್ಟವಾಗಿದೆ. ಇದರಿಂದ ಮಹಿಳೆಯರು ಬಹಳ ಸಂಕಷ್ಟವಾಗಲಿದೆ. ರೈತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೃಷಿಯ ಪ್ರತಿ ಸಲಕರಣೆ ಮೇಲೆ ಜಿಎಸ್ ಟಿ ವಿಧಿಸಲಾಗಿದೆ. ಇದರ ಮಧ್ಯೆ ರೈತ ಶ್ರಮವಹಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.


ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನು ಸರ್ಕಾರ ತುಂಬಿಲ್ಲ. ಎಲ್ಲಾ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ.ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಇದು ಭ್ರಷ್ಟಾ ಹಾಗೂ ಸುಳ್ಳಿನ ಸರ್ಕಾರ. ಈ ಹಣದಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್ ಪ್ರೆಸ್ ವೇ, 186 ಇಎಸ್ ಐ, 30 ಸಾವಿರ ಸ್ಮಾರ್ಟ್ ತರಗತಿ ನಿರ್ಮಾಣ, 30 ಲಕ್ಷ ಮನೆಗಳು ಮಾಡಬಹುದಿತ್ತು ಎಂದು ಹೇಳಿದರು.


ಈ ಸರ್ಕಾರ ಮೀಸಲಾತಿ ವಿಚಾರವಾಗಿ ನಾಲ್ಕು ವರ್ಷ ಏನೂ ಮಾಡಲಿಲ್ಲ. ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಹೆಚ್ಚಳ ಎಂದು ಹೇಳಿ, ಸುಪ್ರೀಂ ಕೋರ್ಟ್ ನಲ್ಲಿ ಇದು ಜಾರಿ ಮಾಡುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿತ್ತು.ಬಿಜೆಪಿ ಎಂದು ಕೊಟ್ಟ ಮಾತಿಗೆ ತಕ್ಕಂತೆ ನಡೆಯುವುದಿಲ್ಲ. ಕಾಂಗ್ರೆಸ್ ಕೊಟ್ಟ ಭರವಸೆ ಈಡೆರಿಸಿವೆ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ, ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.