ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಫೆ. 17 ರಂದು ಮಂಡನೆಯಾಗಲಿದೆ, ಕೊನೆಯ ಬಜೆಟ್ ಇದಾಗಿದ್ದು, ಅಂದು ಬೆಳಗ್ಗೆ 10:15ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭಿಸಿದ್ದು, ಸುಮಾರು 1 ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ ಅವರು 2.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕ್ಷೇತ್ರಕ್ಕೆ 68 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು 55 ಸಾವಿರ ಕೋಟಿ ರೂ., ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ಕ್ಷೇತ್ರಕ್ಕೆ 56 ಸಾವಿರ ಕೋಟಿ ರೂ, ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗೆ 43 ಸಾವಿರ ಕೋಟಿ ರೂ,. ಮಕ್ಕಳ ಅಭ್ಯುದಯಕ್ಕೆ 40 ಸಾವಿರ ಕೋಟಿ ರೂ, ಕೃಷಿನ ಕ್ಷೇತ್ರಕ್ಕೆ 33 ಸಾವಿರ ಕೋಟಿ ರೂ. ಅನುದಾನವನ್ನು ಕೊಡಲಾಗಿತ್ತು.


ಇದನ್ನೂ ಓದಿ : ಸೇವಾ ನ್ಯೂನ್ಯತೆ ಹಿನ್ನೆಲೆ, ಕೋ ಆಪ್ ಸೋಸಾಯಿಟಿಗೆ 1.70 ಲಕ್ಷ ರೂ ದಂಡ ವಿಧಿಸಿದ ಗ್ರಾಹಕರ ಆಯೋಗ


2022-23 ಬಜೆಟ್ ಮಂಡಿಸುವಾಗ ರಾಜ್ಯದ ಹಣಕಾಸಿನ ಸ್ಥಿತಿ ಸುಧಾರಿಸುವತ್ತ ಸಿಎಂ ಬೊಮ್ಮಾಯಿ ಗಮನ ಹರಿಸಿದ್ದರು. ಜನಾಕರ್ಷಣೆಗಿಂತಲೂ ದೂರದೃಷ್ಟಿಯ ಯೋಜನೆಗಳಿಗೆ ಒತ್ತು ನೀಡಿದ್ದರು. ಆದರೆ, ಈ ಬಾರಿಯ ಲೆಕ್ಕಾಚಾರವೇ ಬೇರೆ. ಚುನಾವಣೆಗೆ ಹೊರಡಬೇಕಿರುವುದರಿಂದ ವಿದ್ಯುತ್‌ ದೀಪಗಳು ಝಗಮಗಿಸುವಂತೆ ರಾಜ್ಯಾದ್ಯಂತ ಸಂಚಲನ ಮೂಡಿಸುವ ಮುಂಗಡ ಪತ್ರ ಮಂಡಿಸಬೇಕು ಎಂಬ ಒತ್ತಡ ಬಿಜೆಪಿಯಲ್ಲೇ ಇದೆ.


ನಿರೀಕ್ಷೆ ಭರಪೂರಕ್ಕೆ ಸಿಎಂ ಬೊಮ್ಮಾಯಿ ಕಸರತ್ತು


ಬಜೆಟ್‌ ಸಂಬಂಧದಲ್ಲಿಭರಪೂರ ನಿರೀಕ್ಷೆಗಳಿದ್ದು ಅದಕ್ಕೆ ತಕ್ಕಂತೆ ಪಂಚಕಜ್ಜಾಯ ಬಡಿಸಲು ಸಿಎಂ ಬೊಮ್ಮಾಯಿ ಅವರೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬದ್ಧತಾ ವೆಚ್ಚ ತಗ್ಗಿಸಿ ಯೋಜನಾ ಗಾತ್ರ ಹಿಗ್ಗಿಸುವತ್ತ ಲಕ್ಷ್ಯ ಕೊಟ್ಟಿದ್ದಾರೆ. ಇದರಿಂದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ವ್ಯಯ ಮಾಡಬಹುದು ಎಂಬ ಆಲೋಚನೆ ಸಿಎಂ ಅವರದ್ದಾಗಿದೆ.


1. ಸಾಮಾಜಿಕ ನ್ಯಾಯ: ಸಾಮಾಜಿಕ ನ್ಯಾಯದಡಿ ಹಲವು ಯೋಜನೆ ಪ್ರಕಟಿಸುವ ಸಾಧ್ಯತೆಯಿದೆ. ನಾನಾ ಸಮುದಾಯ ತಲುಪಲು ಸಿಎಂ ಈ ನಿಟ್ಟಿನಲ್ಲಿಗಮನ ಹರಿಸುತ್ತಿದ್ದಾರೆ.


2. ಯುವ ಸಬಲೀಕರಣ : ಯುವಕರು ಸ್ವಂತ ಕಾಲ ಮೇಲೆ ನಿಂತು ಉದ್ಯಮ ಬೆಳೆಸಬೇಕು ಎಂಬ ಆಶಯದಡಿ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ. ಈ ಉದ್ದೇಶಕ್ಕೆ ವಿಶೇಷ ಉತ್ತೇಜನಕಾರಿ ಕ್ರಮ.


3. ವಸತಿ, ಶಿಕ್ಷಣ, ಮೂಲಸೌಕರ್ಯ: ಆಶ್ರಯ ಯೋಜನೆಗಳ ಸಹಾಯಧನ ಹೆಚ್ಚಿಸುವುದರ ಜತೆಗೆ ಶಾಲಾ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪ್ರೋತ್ಸಾಹಕ ಕ್ರಮ ನಿರೀಕ್ಷಿಸಲಾಗಿದೆ.


4. ರೈತ : ರೈತರನ್ನು ಸ್ವಾವಲಂಬಿಗಳಾಗಿಸಲು ಕೃಷಿ ಯಂತ್ರೋಪಕರಣ ಸಬ್ಸಿಡಿ ಇನ್ನಿತರ ಸಾಂಪ್ರದಾಯಿಕ ಉಪಕ್ರಮಗಳ ಜತೆಗೆ ಬೆಳೆ ನಷ್ಟ, ಹವಾಮಾನ ವೈಪರೀತ್ಯದಿಂದ ಕೃಷಿ ಕ್ಷೇತ್ರದ ಮೇಲಾಗಿರುವ ದುಷ್ಪರಿಣಾಮ ನೀಗಿಸಲು ವಿಶೇಷ ಒತ್ತು ಕೊಡುವ ನಿರೀಕ್ಷೆ. ಕೃಷ್ಣಾ, ಕಾವೇರಿ ಕಣಿವೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಭಾರಿ ಅನುದಾನ ನಿರೀಕ್ಷಿಸಲಾಗಿದೆ. ಕಳಸಾ-ಬಂಡೂರಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ನಿರೀಕ್ಷೆಯಿದೆ.


5. ಮಹಿಳಾ : ಮಹಿಳೆಯರಿಗೆ ಆದ್ಯತೆ ನೀಡುವ ಸಿಎಂ ಇಂಗಿತದ ಅನುಸಾರ ಸ್ತ್ರೀಶಕ್ತಿ ಸಂಘಗಳಿಗೆ ಬಲ ತುಂಬುವ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿರೀಕ್ಷೆ. ಜತೆಗೆ ಕೌಟುಂಬಿಕ ನಿರ್ವಹಣೆಗೆ ಸಹಾಯಧನ ನೀಡುವ ವಿಚಾರವೂ ಚರ್ಚೆಯಲ್ಲಿದೆ.


ಇದನ್ನೂ ಓದಿ : ‘ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ”


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.