ಬೆಂಗಳೂರು : 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಮನೆಯ ಮೇಲೂ ಅಕ್ಟೋಬರ್ 28ರಿಂದ ಹತ್ತು ದಿನಗಳ ಕಾಲ ಕನ್ನಡ ಧ್ವಜಾರೋಹಣ ಮಾಡಲಾಗುವುದು ಎಂದು ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯೋತ್ಸವ ಆಚರಣೆ ಕುರಿತು ಕ್ಷೇತ್ರ ವ್ಯಾಪ್ತಿಯ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು, 'ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆಮನೆಯ ಮೇಲೂ ರಾಷ್ಟ್ರಧ್ಜಜ ಹಾರಿಸಿದಂತೆಯೇ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಿಸಲಾಗುವುದು. ಈ ಮೂಲಕ ರಾಜ್ಯೋತ್ಸವಕ್ಕೆ ಸಾಮೂಹಿಕ ಸಂಭ್ರಮದ ಸ್ವರೂಪವನ್ನು ಕೊಡಲಾಗುವುದು ಎಂದರು.


ಇದನ್ನೂ ಓದಿ: “ಬಿಜೆಪಿ ನಾಯಕರು ಇತರೆ ಭಾಷೆಗಳನ್ನು ಹತ್ತಿಕ್ಕಲು ಹೊರಟಿದ್ದಾರೆ”


ಇದರ ಜತೆಗೆ, ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಕಾಲೇಜು ಮೈದಾನದಲ್ಲಿ 'ಮಲ್ಲೇಶ್ವರಂ ಶಾಲಾ ಮಾದರಿ' ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಶಿಕ್ಷಣದ ಡಿಜಿಟಲೀಕರಣ, ಕಲಿಕಾ ನಿರ್ವಹಣಾ ವ್ಯವಸ್ಥೆ ಮತ್ತು ತಂದಿರುವ ಸುಧಾರಣೆಗಳನ್ನು ಕುರಿತು ಜನರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದರು.


ಅಲ್ಲದೆ, ಸರಕಾರವು ಈಗಾಗಲೇ ಘೋಷಿಸಿರುವಂತೆ ಅ.28ರಂದು ಬೆಳಿಗ್ಗೆ 11 ಗಂಟೆಗೆ ಮಲ್ಲೇಶ್ವರಂ ವ್ಯಾಪ್ತಿಯಲ್ಲಿರುವ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ 'ಕೋಟಿ ಕಂಠ ಗಾಯನ' ವ್ಯವಸ್ಥಿತವಾಗಿ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳು ಈಗ ನಡೆಯುತ್ತಿವೆ. ಇದರಲ್ಲಿ ಭಾಗವಹಿಸಲು ಅ.20ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜತೆಗೆ ಪ್ರತಿಯೊಂದು ಬಡಾವಣೆಯಲ್ಲೂ ಕ್ಯೂಆರ್ ಕೋಡ್‌ ಮೂಲಕ ಈ ಪ್ರಕ್ರಿಯೆ ವ್ಯಾಪಕವಾಗಿ ನಡೆಯಲಿದೆ ಎಂದು ಅವರು ವಿವರಿಸಿದರು.


ಇದನ್ನೂ ಓದಿ:  PM Kisan Update: ಸ್ಥಗಿತಗೊಳ್ಳಲಿದೆಯಾ ಪಿಎಂ ಕಿಸಾನ್ ಯೋಜನೆ? ಸರ್ಕಾರ ಹೇಳಿದ್ದೇನು?


ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಮಕ್ಕಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗೆಯೇ 1.10 ಕೋಟಿ ಮಕ್ಕಳು ಪ್ರಾಥಮಿಕ ತರಗತಿಗಳಲ್ಲಿದ್ದಾರೆ. ಇವರೆಲ್ಲರನ್ನೂ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯೋತ್ಸವವನ್ನು ಎಲ್ಲರೂ ಸ್ವ-ಇಚ್ಛೆ ಮತ್ತು ಸಾಮೂಹಿಕ ಸಂಭ್ರಮಗಳಿಂದ ಆಚರಿಸಬೇಕು ಎಂದು ಅವರು ಆಶಿಸಿದರು.


ಖಾಸಗಿ ಶಾಲಾಕಾಲೇಜುಗಳು ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉಳಿದ ಮೈದಾನಗಳಲ್ಲಿ ಕೋಟಿ ಕಂಠ ಗಾಯನ ಮತ್ತು ರಾಜ್ಯೋತ್ಸವವನ್ನು ಆಚರಿಸಲಿವೆ. ಈ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಎಲ್ಲಾ ಶಾಲಾಕಾಲೇಜುಗಳೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು. ಸಭೆಯಲ್ಲಿ ಬಿಇಒ ಉಮಾದೇವಿ, ರಮಾ, ಹರಿಣಿ, ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್‌, ಹಿರಿಯ ಮುಖಂಡ ಗಣೇಶ್‌ರಾವ್‌, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಯೋಗೇಶ್‌ ಮುಂತಾದವರು ಉಪಸ್ಥಿತರಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.