ಧಾರವಾಡ: ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣದಲ್ಲಿ ತನ್ನದೇ ಆದ ಕಿರ್ತಿ ಗಳಿಸಿ, ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಲೆ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಮೂರು ಗಣ್ಯ ಸಾಧಕರಿಗೆ ಪ್ರಥಮ ಬಾರಿಗೆ ರಾಜ್ಯಮಟ್ಟದ ಅರವೇ ಗುರು ಪ್ರಶಸ್ತಿಯನ್ನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಕವಿವಿ ಕುಲಪತಿ ಕೆ.ಬಿ.ಗುಡಸಿ ಅವರು ತಿಳಿಸಿದರು.


COMMERCIAL BREAK
SCROLL TO CONTINUE READING

ಅವರು ಇಂದು ಬೆಳಿಗ್ಗೆ ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ, ಮಾತನಾಡಿದರು.


ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದಲೂ ಕನ್ನಡ ಅಧ್ಯಯನ ಪೀಠದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಕವಿವಿ ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಿದೆ. ಪ್ರಸಕ್ತ ಸಾಲಿನಿಂದ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರ ತಜ್ಞರ ಜಂಟಿ ಶೋಧನಾ ಸಮಿತಿ ರಚಿಸಿ ಗಣ್ಯ ಸಾಧಕರನ್ನು ಗುರುತಿಸಿದೆ. ವಿಶ್ವವಿದ್ಯಾಲಯದ ಈ ನಡೆ ಸಾಹಿತ್ಯಸ್ನೇಹಿ ಆಗಿದ್ದು, ಕವಿವಿ ಲಾಂಚನದಲ್ಲಿರುವ ಘೋಷ ವಾಕ್ಯ ಅರಿವೇ ಗುರು ಹೆಸರಿನಡಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಕುಲಪತಿಗಳು ಹೇಳಿದರು.


ಇದನ್ನೂ ಓದಿ:  ಬಿಜೆಪಿ ಸರ್ಕಾರದ ಬಂದ್ಮೇಲೆ ದ್ವೇಷ ಹೆಚ್ಚಿದೆ, RSS ಕಾನೂನು ಕೈಗೆತ್ತಿಕೊಂಡಿದೆ


ಸಾಹಿತ್ಯ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಶ್ರೀ ನಿರುಪಾಧೀಶ ಸ್ವಾಮೀಜಿ, ವಿಜ್ಞಾನ ಕ್ಷೇತ್ರದಲ್ಲಿ ಡಾ.ಗೌತಮ ದೇಸಿರಾಜು ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ದ ಮನೋಶಾಸ್ತ್ರಜ್ಞ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ ಕವಿವಿಯಿಂದ ಪ್ರಥಮ ಬಾರಿಗೆ ಈ ಅರಿವೇ ಗುರು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ರೂ.25 ಸಾವಿರ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ ಎಂದು ಕುಲಪತಿಗಳು ವಿವರಿಸಿದರು.


ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರು ಕವಿವಿಯ ಸುವರ್ಣಮಹೋತ್ಸವ ಸಭಾಂಗಣದಲ್ಲಿ ನವೆಂಬರ್ 1 ರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡುವರು ಎಂದು ಕುಲಪತಿಗಳು ತಿಳಿಸಿದರು.ಪ್ರಸಕ್ತ ಸಾಲಿನ ರಾಜ್ಯೋತ್ಸವ ಸವಿನೆನಪಿಗಾಗಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಹೆಸರಿನಲ್ಲಿ ನೂತನ ಸಭಾಭವನ ನಿರ್ಮಿಸಲಾಗಿದ್ದು, ಅದನ್ನು ಸಹ ರಾಜ್ಯೋತ್ಸವದಂದು ಉದ್ಘಾಟಿಸಲಾಗುವುದು ಎಂದರು.


ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಸರಾಂತ ಸಾಹಿತಿಗಳನ್ನು, ಸಾಹಿತ್ಯದ ಅಮೂಲ್ಯ ಕಾಣಿಕೆಗಳನ್ನು ನೀಡಿರುವ ಕವಿವಿಯ ಕನ್ನಡ ಅಧ್ಯಯನ ಪೀಠವು ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಭಾರತಿ ಸಂಶೋಧನಾ ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಿದೆ. ಸಂಶೋಧಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರ ಸಂಶೋಧನಾ ಕ್ಷೇತ್ರಕ್ಕೆ ಇದು ಹೆಚ್ಚು ಸಹಾಯವಾಗಲಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಭಾಗಿ..!


ಧಾರವಾಡ ಜಿಲ್ಲಾಡಳಿತ ಮತ್ತು ಕೃಷಿ, ತೋಟಗಾರಿಕೆ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಉದ್ಯಾನ ವಿಭಾಗವು ಪ್ರಥಮ, ದ್ವಿತೀಯ ಸೇರಿದಂತೆ ಒಟ್ಟು ಹತ್ತು ಪ್ರಶಸ್ತಿಗಳೊಂದಿಗೆ ಚಾಂಪಿಯನ್ ಪಟ್ಟಗಳಿಸಿದೆ. ಇದು ನಮ್ಮ ಉದ್ಯಾನ ವಿಭಾಗ ಮತ್ತು ಕವಿವಿ ಕ್ಯಾಂಪ್ಸ್ ಹಸಿರೀಕರಣಕ್ಜೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಕುಲಪತಿಗಳು ಹೇಳಿದರು.


ಕುಲಸಚಿವ ಯಶಪಾಲ ಕ್ಷೀರಸಾಗರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲ್ಯಮಾಪನ ಕುಲಸಚಿವ ಡಾ.ಸಿ.ಕೃಷ್ಣಮೂರ್ತಿ ಅವರು ವಂದಿಸಿದರು. ಡಾ.ಜೆ.ಎಂ.ಚಂದುನವರ ಕಾರ್ಯಕ್ರಮ ನಿರೂಪಿಸಿದರು.ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಎನ್.ವೈ. ಮಟ್ಟಹಾಳ, ಪ್ರಸಾರಂಗದ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ, ಮತ್ತು ಕವಿವಿ ಉದ್ಯಾನಾಧಿಕಾರಿ ಡಾ.ಜಿ.ಎಸ್.ಮುಳಗುಂದ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ