ಬೆಂಗಳೂರು :  ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ಅಸ್ಸಾಂ ಮೂಲದ ಇಬ್ಬರು ಶಂಕಿತ ಉಗ್ರರ ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗವಾಗುತ್ತಿವೆ. ಉಗ್ರವಾದದತ್ತ ಮುಖ‌ ಮಾಡಿದ್ದ ಶಂಕಿತರಿಗೆ ಆಲ್ ಖೈದಾ‌ ಉಗ್ರಗಾಮಿ ಸಂಘಟನೆ ಬಿಗ್ ಆಫರ್ ನೀಡಿತ್ತು ಎಂಬ ಅಂಶ ಇದೀಗ ಬಯಲಾಗಿದೆ. ಶಂಕಿತ ಉಗ್ರರಿಗೆ ನೀವು ಕಾಶ್ಮೀರಕ್ಕೆ ಬನ್ನಿ, ನಾವು ಪಾಕ್ ಗಡಿಗೆ ಕರೆಸಿಕೊಳ್ಳುತ್ತೇವೆ. ಹಣ, ಗನ್ ನೀಡಿ ಸಂಘಟನೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ಆಲ್ ಖೈದಾ ಸಂಘಟನೆ ಬಿಗ್ ಆಫರ್ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಶಂಕಿತರು ಟೆಲಿಗ್ರಾಮ್ ಹಾಗೂ ಫೇಸ್ ಬುಕ್ ಮೂಲಕ ಉಗ್ರ ನಾಯಕರ ಭಾಷಣದ ವಿಡಿಯೋ ಪೋಸ್ಟ್ ಮಾಡುತ್ತಿದ್ದರು. ಸಮಾಜದ ಸ್ವ್ಯಾಸ್ತ ಹಾಳುಮಾಡುವ ವಿಡಿಯೋ ಪೋಸ್ಟ್ ಬಗ್ಗೆ ಫೇಸ್ ಬುಕ್ ಎಚ್ಚರಿಸಿ ನಂತರ ಬ್ಲಾಕ್ ಮಾಡಿದ್ದರೂ ಸಹ ಅಖ್ತರ್ ಹುಸೇನ್ ನಕಲಿ ಅಕೌಂಟ್ ತೆರೆದು ತನ್ನ ಚಟುವಟಿಕೆ ಮುಂದುವರೆಸಿದ್ದ. ಬಂಗಾಳಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಬರಹಗಳು ಹಾಗೂ ವಿಡಿಯೋ ಕುರಿತಾಗಿ ಮಾಹಿತಿ ನೀಡುವಂತೆ ಫೇಸ್ ಬುಕ್, ಟೆಲಿಗ್ರಾಂ, ವಾಟ್ಸಾಪ್ ಕಂಪನಿಗಳಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.


ಇದನ್ನೂ ಓದಿ : ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ: ಸರ್ಕಾರಕ್ಕೆ ಎಚ್‌ಡಿಕೆ ಎಚ್ಚರಿಕೆ


ಸಾಮಾಜಿಕ‌ ಜಾಲತಾಣದಲ್ಲಿ ಉಗ್ರ ಚಟುವಟಿಕೆ ಬಗ್ಗೆ ಸಕ್ರಿಯವಾಗಿದ್ದರ ಬಗ್ಗೆ ಗಮನಿಸಿದ ಆಲ್ ಖೈದಾ ಸಂಘಟನೆಯ ಸದ್ಯಸರು, ಶಂಕಿತರನ್ನು ಸಂಪರ್ಕಿಸಿ ಜಿಹಾದ್ ಹೋರಾಟದ ಬಗ್ಗೆ ಮತ್ತಷ್ಟು ಬ್ರೈನ್ ವಾಶ್ ಮಾಡಿದ್ದರು. ಇದೇ ಮನಸ್ಥಿತಿ ಹೊಂದಿದ್ದ ತಮಿಳುನಾಡಿನ ಸೇಲಂ‌ನಲ್ಲಿ ಬಂಧಿತನಾಗಿದ್ದ ಆದಿಲ್ ಹುಸೇನ್ ಉರುಫ್ ಜುಬಾನನ್ನ ಮನಪರಿವರ್ತಿಸಿದ್ದರು. ಅಚ್ಚರಿಯ ವಿಷಯವೆಂದರೆ ಇಬ್ಬರು ಶಂಕಿತ ಉಗ್ರರಿಗೂ ಪರಿಚಯವಿರಲಿಲ್ಲ. ನಾಲ್ಕು ತಿಂಗಳ ಹಿಂದೆಯಷ್ಟೇ ಆಲ್ ಖೈದಾ ಸಂಘಟನೆಯ ಪಶ್ಚಿಮ ಬಂಗಾಳ ಮೂಲದ ಉಗ್ರ ಇವರಿಬ್ಬರ ಸಂಪರ್ಕಕ್ಕೆ ಕಾರಣನಾಗಿದ್ದ. ಸಿಸಿಬಿ ಬಂಧಿಸುವ ಒಂದು ವಾರದ ಹಿಂದೆ ಇಬ್ಬರಿಗೆ ಕಾಶ್ಮೀರಕ್ಕೆ ಬನ್ನಿ ಎಂದು ಆಹ್ವಾನ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.


ಸೆರೆಸಿಕ್ಕ ಇಬ್ಬರು ಶಂಕಿತ ಉಗ್ರರ ಬಳಿ ಅಲ್ ಖೈದಾ ಹ್ಯಾಂಡ್ಲರ್ ನಡೆಸಿರುವ ಸಂಭಾಷಣೆ ದೊರೆತಿದೆ. ಶಂಕಿತ ಉಗ್ರರಾದ ಅಕ್ತರ್ ಹುಸೇನ್ ಮತ್ತು ಜುಬಾ ಜೊತೆ ಬಂಗಾಳಿ ಭಾಷೆಯಲ್ಲಿ ಅಲ್ ಖೈದಾ ಹ್ಯಾಂಡ್ಲರ್ ಚಾಟ್ ಮಾಡಿದ್ದಾನೆ. ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ. ಅಲ್ಲಾಹುಗಾಗಿ ನೀವು ಎಲ್ಲದಕ್ಕೂ ಸಿದ್ಧರಿರಬೇಕೆಂದು ಯುವಕರ ತಲೆ ಕೆಡಿಸಿದ್ದಾನೆ. ದುಬೈಗೆ ಬಂದು ಆಫ್ಘಾನಿಸ್ಥಾನಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಿದ್ದಾನೆ. ಇದಕ್ಕಾಗಿ 2 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ಹ್ಯಾಂಡ್ಲರ್ ಸೂಚಿಸಿದ್ದ. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನ ಗಡಿಯೊಳಗೆ ಕರೆದುಕೊಂಡು ಹೋಗುವುದಾಗಿ ಸಂದೇಶ ರವಾನಿಸಿದ್ದ. ಸ್ಥಳ ತಲುಪಿದ ಮೇಲೆ ಹಣ ಹಾಗೂ ತರಬೇತಿ ಕೊಡಲಾಗುತ್ತದೆ. ಬಂದೂಕು ನಿಮ್ಮ ಕೈಲಿರುತ್ತೆ. ನೀವೇ ಅಧಿಪತಿ ಎಂದು ಆಮಿಷವೊಡ್ಡಿರುವ ಬಗ್ಗೆ ಮಾಹಿತಿ ಲಭಿಸಿದೆ.


ಇದನ್ನೂ ಓದಿ : ನಮ್ಮನ್ನ ಹುಡುಕಬೇಡಿ! ಪೋಷಕರಿಗೆ ಕರೆ ಮಾಡಿ ಇಬ್ಬರು ವಿದ್ಯಾರ್ಥಿನಿಯರು‌ ನಾಪತ್ತೆ


ಅಖ್ತರ್ ತಂದೆ  ಗ್ರಾಮ ಪಂಚಾಯಿತಿ ಮಾಜಿ‌ ಅಧ್ಯಕ್ಷ :
ಹಗಲಿನಲ್ಲಿ‌ ಉಗ್ರವಾದ ಚಟುವಟಕೆಯಲ್ಲಿ ತೊಡಗಿದ್ದ ಅಖ್ತರ್ ರಾತ್ರಿ ಡೆಲಿವರಿ ಬಾಯ್  ಕೆಲಸ ಮಾಡುತ್ತಿದ್ದ. ಬರುವ ಸಂಬಳದಲ್ಲಿ ಪ್ರತಿ ತಿಂಗಳು 10 ಸಾವಿರ ತನ್ನ ತಾಯಿಗೆ ಕಳುಹಿಸುತ್ತಿದ್ದ. ಅಖ್ತರ್ ತಂದೆ ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಜಿ  ಅಧ್ಯಕ್ಷನಾಗಿದ್ದ. ಮುಂದಿನ ವಾರದಲ್ಲಿ ಶಂಕಿತರು ರೈಲಿನಲ್ಲಿ ಕಾಶ್ಮೀರಕ್ಕೆ ಹೊರಡಲು ಸಜ್ಜಾಗಿದ್ದರು ಎನ್ನಲಾಗಿದೆ. ಆದರೆ ಅಷ್ಟರಲ್ಲಿ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.