ಬೆಂಗಳೂರು : ಶಾಂತಿನಗರ ಒಂದನೇ ಡಿಪೋದಲ್ಲಿ ಇಂದು ಬೆಳಿಗ್ಗೆ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಅಪಘಾತದಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ತನಿಖೆ ವೇಳೆ ಬಸ್ ಚಾಲಕ ಮೊಹಿನುದ್ದೀನ್ (42), ರಾತ್ರಿ 12.30ರ ಸುಮಾರಿಗೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ಅಪಘಾತ ನಡೆದಿದ್ದು, ತಾನು ಬಸ್ ನಿಲ್ಲಿಸದೆ ಬೆಂಗಳೂರಿಗೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕೊನೆಯ ನಿಲ್ದಾಣವಾದ ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ಬಳಿಕ ಡಿಪೋ ಬಳಿ ಬಸ್‌ನ ಕೆಳಗೆ ನೋಡಿದಾಗ ವ್ಯಕ್ತಿಯ ಶವ ಇರುವುದನ್ನು ಕಂಡು, ಹೆದರಿ, ಆ ಶವವನ್ನು ಎಳೆದು ಎರಡು ಬಸ್ಗಳ ನಡುವೆ ಹಾಕಿ ಹೋಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 


ಈ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಮೊಹಿನುದ್ದೀನ್ ವಿರುದ್ಧ ಸಾಕ್ಷ್ಯನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ವಶಕ್ಕೆ ಪಡೆಯಲಾಗಿದೆ ಎಂದು ವಿಲ್ಸನ್ ಗಾರ್ಡನ್ ಪೊಲೀಸರು ಹೇಳಿದ್ದಾರೆ. 


ಆದರೆ, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅದಕ್ಕಾಗಿ ಅಪಘಾತ ನಡೆದ ಸ್ಥಳವನ್ನು ಪತ್ತೆ ಹಚ್ಚಿ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.