ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಪಕ್ಷಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಏತನ್ಮಧ್ಯೆ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹೊತ್ತಿಕೊಂಡ ಪ್ರತಿಭಟನೆಯ ಕಿಚ್ಚು ರಾಷ್ಟ್ರರಾಜಧಾನಿ ದೆಹಲಿಗೆ ವ್ಯಾಪಿಸಿದ್ದು, ಇದೀಗ ಕರ್ನಾಟಕದ ಬೆಂಗಳೂರು,  ಮಂಗಳೂರು, ಕಲಬುರಗಿ, ಮೈಸೂರು, ಹಾಸನ, ಚಾಮರಾಜನಗರ, ಹುಬ್ಬಳಿ ನಗರಗಳಿಗೂ ಕೂಡ ವ್ಯಾಪಿಸಿದೆ. ಹೀಗಾಗಿ ರಾಜ್ಯದ ಎಲ್ಲಾ  ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ನಾಳೆ ಮಧ್ಯರಾತ್ರಿಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.


COMMERCIAL BREAK
SCROLL TO CONTINUE READING

ಇಂದು ರಾಜ್ಯದ ಮಂಗಳೂರಿನಲ್ಲಿ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದು, ನಂತರ ಹಿಂಸಾಚಾರಕ್ಕೆ ತಿರುಗಿದೆ.  ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯೂ ಕೂಡ ಸಿಡಿಸಿದ್ದಾರೆ. ಇದಕ್ಕೂ ಬಗ್ಗದ ಪ್ರತಿಭಟನಾಕಾರರು ಪೊಲೀಸರೆ ಮೇಲೆಯೇ ಕಲ್ಲುತೂರಾಟ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್. ಹರ್ಷ ಮಂಗಳೂರಿನ ಒಟ್ಟು ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 20ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಸಿದ್ದಾರೆ. ನಗರದ ಕದ್ರಿ, ಪಾಂಡೇಶ್ವರ, ಊರ್ವ, ಬಂದರು, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ನಾಳೆ ಮಧ್ಯರಾತ್ರಿಯವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕಂಡಲ್ಲಿ ಗುಂಡು ಆದೇಶವನ್ನು ಸಹ ನೀಡಲಾಗಿದೆ.


ಈ ಕಾಯ್ದೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ  ಪ್ರತಿಭಟನಾಕಾರನೊಬ್ಬ ಟಿಪ್ಪು ಸುಲ್ತಾನ್ ನನ್ನು 'ರಾಷ್ಟ್ರಪಿತ' ಎಂದು ಕೂಗಿದ್ದಾನೆ. ನಗರದ ಟೌನ್ ಹಾಲ್ ಬಳಿ ಗುಂಪುಗೂಡಿದ್ದ ಪ್ರತಿಭಟನಾಕಾರರು ನಂತರ ಧರಣಿ ನಡೆಸಲು ಮುಂದಾಗಿದ್ದು, ಈ ವೇಳೆ ಯುವತಿಯೋರ್ವಳು ರಸ್ತೆಯಲ್ಲಿಯೇ ಬಿದ್ದು ಹೊರಲಾದಳು ಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದಿದೆ.


ಇದೆ ರೀತಿ ರಾಜ್ಯದ ಕಲಬುರಗಿ, ಮೈಸೂರು, ಹಾಸನ, ಚಾಮರಾಜನಗರ, ಹುಬ್ಬಳ್ಳಿ ನಗರಗಳಲ್ಲಿಯೂ ಕೂಡ ಪ್ರತಿಭಟನೆಗಳು ನಡೆದಿದ್ದು, ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.