ಯಡಿಯೂರಪ್ಪನವ್ರೇ, ನಿಮ್ಮ ಅನೀತಿಗಳಿಗೆ ಸಂವಿಧಾನ ಮತ್ತೆ ಪಾಠ ಕಲಿಸಲಿದೆ: ಕಾಂಗ್ರೆಸ್
ಯಡಿಯೂರಪ್ಪನವರ ಅನೀತಿಗಳಿಗೆ ಸಂವಿಧಾನವೇ ಮತ್ತೊಮ್ಮೆ ಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು: ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿರುವ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರ ರಚನೆಗೆ ಇಷ್ಟೊಂದು ಅವಸರ ಬೇಡ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಯಾವಾಗಲೂ ಸಂವಿಧಾನದ ಕಟ್ಟಲೆಗಳನ್ನು ಮೀರಿ ತಮ್ಮದೇ ಸರ್ವಾಧಿಕಾರಿ ಧೋರಣೆಗಳನ್ನು ಪ್ರದರ್ಶಿಸಲು ಯತ್ನಿಸುವ ಬಿಜೆಪಿ ಮತ್ತು ಯಡಿಯೂರಪ್ಪ ಅವರು ತಮ್ಮದೇ ಕರಾಳ ಇತಿಹಾಸದಿಂದ ಇನ್ನೂ ಪಾಠ ಕಲಿಯದಿರುವುದು ನಿಜಕ್ಕೂ ದುರಂತ. ಯಡಿಯೂರಪ್ಪನವರ ಅನೀತಿಗಳಿಗೆ ಸಂವಿಧಾನವೇ ಮತ್ತೊಮ್ಮೆ ಪಾಠ ಕಲಿಸಲಿದೆ ಎಂದು ಹೇಳಿದೆ.
ಅಷ್ಟೇ ಅಲ್ಲದೆ, ಜನಾದೇಶ ಧಿಕ್ಕರಿಸುವಂತಹ, ಪ್ರಜಾಪ್ರಭುತ್ವವನ್ನು ನಿರಾಕರಿಸುವಂತಹ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿ ಮತ್ತು ಪ್ರಮಾಣವಚನಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನೂ ಕಾಂಗ್ರೆಸ್ ಖಂಡಿಸಿದೆ.