ಬೆಂಗಳೂರು: ಬಡತನದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಸ್ಕಾನ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬಿಡಿಎ ಕ್ವಾಟ್ರಸ್‌ನಲ್ಲಿ ವಿತರಿಸಿದರು.


COMMERCIAL BREAK
SCROLL TO CONTINUE READING

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹೂ ಮಾರಿಕೊಂಡು, ಕೂಲಿ ಮಾಡಿಕೊಂಡು ಜೀವನ‌ನಡೆಸುವ ಬಡ ಕುಟುಂಬದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅವರಿಗೆ ಇಸ್ಕಾನ್ ವತಿಯಿಂದ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ‌ ಶ್ಲಾಘನೀಯ.‌ ಸಾಂಕೇತಿಕವಾಗಿ 10 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಇಸ್ಕಾನ್ ವಿದ್ಯಾರ್ಥಿ ವೇತನ ವಿತರಿಸಲಿದೆ ಎಂದರು.


ಜಮಖಂಡಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್:
ಜಮಖಂಡಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಮೂರ್ನಾಲ್ಕು ದಿನದಿಂದ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್‌ ಮತ್ತೊಮ್ಮೆ ಗೆಲ್ಲುವ ಪೂರಕ ವಾತಾವರಣ ಅಲ್ಲಿದೆ. ಸಿದ್ದು ನ್ಯಾಮಗೌಡರು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರ ಮಗ ಯುವಕನಾಗಿದ್ದರೂ ತಂದೆಯ ಮಾರ್ಗದಲ್ಲಿಯೇ ಸಾಗಿದ್ದಾರೆ. ಹೀಗಾಗಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು. 


ಬಳ್ಳಾರಿಯಲ್ಲಿ ಜಾತಿ ರಾಜಕೀಯ:
ಬಳ್ಳಾರಿಯಲ್ಲಿ ಕೆಲವರು ಜಾತಿ ಹೆಸರಿನಲ್ಲಿ ಮತಯಾಚನೆ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಯಾರೂ ಕೂಡ ಜಾತಿ ಮುಂದಿಟ್ಟುಕೊಂಡು ಹೋಗಬಾರದು ಎಂದು ಪರಮೇಶ್ವರ್ ಹೇಳಿದರು.


ವಾಲ್ಮೀಕಿ ಜಯಂತಿ ಆಚರಣೆಯಲ್ಲಿನ ಗೈರಿಗೆ ಕ್ಷಮೆಯಾಚನೆ:
ಇದೇ ಸಂದರ್ಭದಲ್ಲಿ ವಾಲ್ಮಿಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗದೇ ಇರುವುದಕ್ಕೆ‌ ಆ ಸಮುದಾಯದವರ ಕ್ಷಮೆಯಾಚಿಸುವೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಸಿಎಂ ಹೋಗುವ ನಿರೀಕ್ಷೆ ಇತ್ತು. ನಾನು ಈ ಸಂದರ್ಭದಲ್ಲಿ ಜಮಖಂಡಿಯಲ್ಲಿ ಪ್ರಚಾರದಲ್ಲಿದ್ದೆ.‌ ಸಿಎಂ ಅವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಎದುರಾದ ಕಾರಣ ಅವರು ಹೋಗಲಾಗಿಲ್ಲ.‌ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ.‌ ಹೀಗಾಗಿ ವಾಲ್ಮಿಕಿ ಸಮುದಾಯದ ಭಾವನೆಗೆ ದಕ್ಕೆಯಾಗಿದ್ದರೆ ಕ್ಷಮೆಯಾಚಿಸುವೆ ಎಂದರು.