ನವದೆಹಲಿ: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಮಾಡುವಂತೆ ಮತ್ತು ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಪತ್ನಿ ಉಷಾ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ದೆಹಲಿ ಹೈ ಕೋರ್ಟಿನ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಳೆದ ವಾರ ನಡೆಸಿದ ವಿಚಾರಣೆ ವೇಳೆ ನ್ಯಾಯಪೀಠವು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ತಡೆ ನೀಡಿ ಏಳು ದಿನಗಳ ಬಳಿಕ ಹೊಸ ಸಮನ್ಸ್ ನೀಡದಂತೆ ಜಾರಿ ನಿರ್ದೇಶನಾಕಯಕ್ಕೆ ಸೂಚನೆ ನೀಡಿತ್ತು. ಇಂದು ಗೌರಮ್ಮ ಮತ್ತು ಉಷಾ ಅವರನ್ನು ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕೋ ಅಥವಾ ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಸಬೇಕೋ ಎಂಬ ಬಗ್ಗೆ ನಿರ್ಧರಿಸಲಿದೆ.


ಕಳೆದ ವಿಚಾರಣೆ ವೇಳೆ ಗೌರಮ್ಮ ಮತ್ತು ಉಷಾ ಅವರ ಪರ ವಕೀಲರು ಸಿ ಆರ್ ಪಿ ಸಿ 160ರ ಪ್ರಕಾರ ಪುರುಷರನ್ನು ಮಾತ್ರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಬೇಕು. ಈ ಕಾನೂನಿನಲ್ಲಿ ಮಹಿಳೆಯರ ವಿಚಾರಣೆ ನಡೆಸುವ ಬಗ್ಗೆ ಸ್ಪಷ್ಟೀಕರಣ ಇಲ್ಲ. ಜೊತೆಗೆ ಗೌರಮ್ಮ ಅವರಿಗೆ 85 ವರ್ಷ ವಯಸ್ಸಾಗಿದ್ದು ಅವರು ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಆದುದರಿಂದ ಅವರನ್ನು ಬೆಂಗಳೂರಿನಲ್ಲೇ ವಿಚಾರಣೆ ನಡೆಸಲು ಅನುವು ಮಾಡಬೇಕು ಎಂದು ನ್ಯಾಯಪೀಠದೆದುರು ಮನವಿ ಮಾಡಿಕೊಂಡಿದ್ದರು.


ವಿಶೇಷ ಎಂದರೆ ಇಂದು ದೆಹಲಿ ಹೈಕೋರ್ಟ್ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪುನ್ನು ಕೂಡ ಪ್ರಕಟಿಸುವ ಸಾಧ್ಯತೆ ಇದೆ. ಅಕ್ಟೋಬರ್ 18ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠವು ತೀರ್ಪುನ್ನು ಕಾಯ್ದಿರಿಸಿತ್ತು.