ತುಮಕೂರು: ಬೆಳಿಗ್ಗೆಗೆ ಹೋಲಿಸಿದರೆ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಕೃತಕ ಉಸಿರಾಟ ವ್ಯವಸ್ಥೆಯಿಲ್ಲದೆ ಸ್ವಾಮೀಜಿ ಸಹಜವಾಗಿ ಉಸಿರಾಡುತ್ತಿದ್ದಾರೆ. ಶ್ರೀಗಳ ಆರೋಗ್ಯದ ಬಗ್ಗೆ ಭಕ್ತರು ಆತಂಕ ಪಡಬೇಕಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಎರಡನೇ ಬಾರಿಗೆ ಮಾಧ್ಯಮಗಳಿಗೆ ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ ಇದ್ದ ಪರಿಸ್ಥಿತಿಗಿಂತಲೂ ಈಗ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹೀಗಾಗಿ ಭಕ್ತರು ಆತಂಕ ಪಡಬೇಕಿಲ್ಲ. ಶ್ರೀಗಳ ಆರೋಗ್ಯದ ಕುರಿತು ಬೆಂಗಳೂರಿನ ನುರಿತ ವೈದ್ಯರೊಂದಿಗೆ ಸಲಹೆ ಪಡೆದು ಚಿಕಿತ್ಸೆ ಮುಂದುವರೆಸಿದ್ದೇವೆ. ಬೆಂಗಳೂರಿನಿಂದ ಕೆಲ ವೈದ್ಯರು ಆಗಮಿಸುತ್ತಿದ್ದಾರೆ. ಅವರು ಬಂದ ಕೂಡಲೇ ಶ್ರೀಗಳಿಗೆ ಅವರು ಚಿಕಿತ್ಸೆ ನಡೆಸಲಿದ್ದಾರೆ ಎಂದು ಹೇಳಿದರು.


ಕೆಲ ತಿಂಗಳುಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ರೇಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ, ಸ್ವಲ್ಪ ಗುಣಮುಖರಾಗಿದ್ದ ಅವರ ಆರೋಗ್ಯ ಇಂದು ಬೆಳಗ್ಗೆಯಿಂದ ಇನ್ನಷ್ಟು ಹದಗೆಟ್ಟಿತ್ತು. ಈ ಬಗ್ಗೆ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಮಾಹಿತಿ ನೀಡಿದ್ದರು. 


ಇದೀಗ ಮತ್ತೆ ಶ್ರೀಗಳ ಆರೋಗ್ಯ ಮಾಹಿತಿ ನೀಡಿರುವ ಡಾ. ಪರಮೇಶ್, ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಕ್ರಿಟಿಕಲ್ ಪರಿಸ್ಥಿತಿ ಇದ್ದರೂ ಎಲ್ಲ ರೀತಿಯ ಚಿಕಿತ್ಸೆ ಮುಂದುವರೆದಿದೆ. ಬೆಂಗಳೂರಿನಿಂದಲೂ ವೈದ್ಯರ ತಂಡ ಆಗಮಿಸುತ್ತಿದ್ದು,
ಭಕ್ತರು ಯಾವುದೇ ಆತಂಕ ಪಡುವುದು ಬೇಡ. ಭಕ್ತರು ಮಠಕ್ಕೆ ಸದ್ಯ ಬರುವುದು ಬೇಡ ಎಂದು ಸಿದ್ಧಗಂಗಾ ಮಠಕ್ಕೆ ಆಗಮಿಸದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.