ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಲ್ಪಸಂಖ್ಯಾತರ ಓಟ್ ಗಾಗಿ ಓಲೈಕೆ ರಾಜಕಾರಣ ಮಾಡುವ ಮೂಲಕ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


COMMERCIAL BREAK
SCROLL TO CONTINUE READING

ಇಂದು  ವಿಕಾಸಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಆರಗ ಜ್ಞಾನೇಂದ್ರ,‌ ಅಲ್ಪಸಂಖ್ಯಾತರ ಓಟ್ ಗಾಗಿ ಓಲೈಕೆ ರಾಜಕಾರಣವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಮಂಗಳೂರು ಸ್ಫೋಟ ಪ್ರಕರಣಕ್ಕೂ  ಓಟರ್ ಲಿಸ್ಟ್ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ. ಯಾವುದನ್ನೂ ರಾಜ್ಯ ಸರ್ಕಾರ ಮುಚ್ಚಿಟ್ಟಿಲ್ಲ. ಮತಪಟ್ಟಿ ಅಕ್ರಮದಲ್ಲಿ ಯಾರನ್ನು ಬಂಧನ ಮಾಡಬೇಕಿತ್ತು ಅದನ್ನು ಮಾಡಿದೆ. ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ ಎಂದರು.


ಇದನ್ನೂ ಓದಿ : DK Shivakumar : ಮಂಗಳೂರು ಕುಕ್ಕರ್ ಬ್ಲಾಸ್ಟ್ : 'ಸರ್ಕಾರ ಮತದಾರರ ಮಾಹಿತಿ ಕಳ್ಳತನ ವಿಚಾರ ಡೈವರ್ಟ್ ಮಾಡುವುದು'


ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿ ತುಂಬಾ ನೋವಾಯಿತು. ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಆಡುವ ಮಾತಲ್ಲ ಇದು. ಇದನ್ನು ನಾನು ಖಂಡಿಸುತ್ತೇನೆ. ದೇಶದ ಆಂತರಿಕ ಭದ್ರತೆಯ ವಿಚಾರ ಇದು.  ನಾವೆಲ್ಲಾ ರಾಜಕಾರಣವನ್ನು ಮೀರಿ ಇದರ ಬಗ್ಗೆ  ಹೇಳಿಕೆ ನೀಡಬೇಕು ಎಂದು ಹೇಳಿದರು.


ಡಿಕೆ ಶಿವಕುಮಾರ್ ಅವರ ಪಕ್ಷದ ಸರ್ಕಾರ ಇದ್ದಾಗ ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಪಟಾಕಿಯಂತೆ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಪೊಲೀಸ್ ಇಲಾಖೆಯನ್ನು ಭದ್ರಪಡಿಸಲಾಯಿತು. ಹಾಗೂ ಭಯೋತ್ಪಾದನಾ ಮುಕ್ತ ದೇಶ ವನ್ನಾಗಿ ಮಾಡಲು ಪ್ರಯತ್ನ ಪಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಡಿಕೆ ಶಿವಕುಮಾರ್ ನಂತವರು  ಈ‌ ರೀತಿ ಮಾತನಾಡುತ್ತಿದ್ದರೆ ಪೊಲೀಸರ ನೈತಿಕತೆ ಕುಗ್ಗಿಸಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮಂಗಳೂರು ಸ್ಫೋಟದ ವಿಚಾರವಾಗಿ ತನಿಖೆಗೂ ಮೊದಲೇ ಡಿಜಿಪಿ ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಆರೋಪಿ ಶಾರೀಕ್ ಈ ಹಿಂದೆ ಯುಎಪಿಎ ಅಡಿಯಲ್ಲಿ ಬಂಧನ ಆಗಿದ್ದ ವ್ಯಕ್ತಿ. ಆತನ ಎಲ್ಲಾ ಜಾತಕಗಳು ಇವೆ. ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡ ಬಳಿಕ ನಾಪತ್ತೆ ಆಗಿದ್ದ. ಪೊಲೀಸರು ಅವನನ್ನು ಹುಡುಕುತ್ತಿದ್ದರು. ಅವರ ಬೇರೆ ಜಾತಕ ಬೇಡ ಅವನ ಬಗ್ಗೆ. ಅದರ ಹಿನ್ನೆಲೆಯಲ್ಲಿ ಡಿಜಿಪಿ ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿ ಇಂತಹ ವ್ಯಕ್ತಿಯ ಮೇಲೆ ವಕಾಲತ್ತು ವಹಿಸುತ್ತಾರೆ ಎಂದರೆ ಅವರ ರಾಜಕಾರಣಕ್ಕೆ ಏನು ಹೇಳಬೇಕು ಎಂದು ಗೊತ್ತಿಲ್ಲ ಎಂದು ಕಿಡಿಕಾರಿದರು.


ಶಾರಿಕ್ ಅವತ್ತು ಭಯೋತ್ಪಾದಕನೇ ಇವತ್ತೂ ಭಯೋತ್ಪಾದಕನೇ. ಅದರಲ್ಲಿ ಎರಡು ಮಾತಿಲ್ಲ. ಡಿಜಿಪಿ ಟ್ವೀಟ್ ಹೇಳಿಕೆಯನ್ನು ನಾನು ಸಮರ್ಥನೆ ಮಾಡುತ್ತೇನೆ‌ ಎಂದರು.


ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಇವಾಗ ಎನ್ ಐಎ ತನಿಖೆ ನಡೆಸುತ್ತಿದೆ. ಎಲ್ಲವೂ ಹೊರಗಡೆ ಬರುತ್ತಿದೆ. ಪುಲ್ವಾಮಾ, ಮುಂಬೈ ದಾಳಿಗಳು ಎಲ್ಲವೂ ಕಾಂಗ್ರೆಸ್ ಕೂಸುಗಳೇ. ಇವರೇ ಈ ದೇಶದಲ್ಲಿ ಈ ರೀತಿಯನ್ನು‌ ಹುಟ್ಟು ಹಾಕಿದ್ದು. ಆದರೆ ಬಿಜೆಪಿ ಕೇಂದ್ರ ಸರ್ಕಾರ ಅದನ್ನು ನಿರ್ನಾಮ ಮಾಡುತ್ತಿದೆ. ಅದನ್ನು ಡಿಕೆಶಿಗೆ ಸಹಿಸಲು ಆಗುತ್ತಿಲ್ವಾ?  ಎಂದು ಪ್ರಶ್ನಿಸಿದರು.


ಉಗ್ರ‌ ಶಾರಿಕ್ ಒಂದು ವೇಳೆ  ಜನನಿಬಿಡ ಪ್ರದೇಶದಲ್ಲಿ ಬಾಂಬ್ ಇಟ್ಟಿದ್ದರೆ ಏನು ಆಗುತ್ತಿತ್ತು? ಅವನ ತಂಡ ಬಾಂಬ್ ಟ್ರಯಲ್ ನೋಡಿದ್ದಾರೆ. ಡಿಕೆಶಿ ಇಂತಹ ಹೇಳಿಕೆ ಖಂಡನೀಯ. ಓಟಿಗಾಗಿ ಓಲೈಕೆ ರಾಜಕೀಯ ಬಿಟ್ಟು ದೇಶದ ಆಂತರಿಕ ಭದ್ರತೆಯ ಬಗ್ಗೆ ಯೋಚನೆ ಮಾಡಬೇಕು ಎಂದರು.


ಇದನ್ನೂ ಓದಿ : ರಾಜ್ಯದ ಉತ್ತರ -ದಕ್ಷಿಣವಾಗಿ ಡಿಕೆಶಿ -ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.