ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬಂದು ಹಣ ವಾಪಸ್ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಂದೇಶ ಹರಿಬಿಟ್ಟಿದ್ದಾನೆ.


COMMERCIAL BREAK
SCROLL TO CONTINUE READING

"ಅನಾರೋಗ್ಯದಿಂದಾಗಿ ತಾನು ಬಳಲುತ್ತಿದ್ದು, ಹೃದಯ ಮತ್ತು ಮಧುಮೇಹ ಸಂಬಂಧಿ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಈಗ ನನ್ನ ಬಳಿ ಹಣವೆಲ್ಲಾ ಖಾಲಿಯಾಗಿದ್ದು, ಇಲ್ಲಿ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಹಾಗಾಗಿ 24 ಗಂಟೆಗಳ ಒಳಗೆ ಭಾರತಕ್ಕೆ ಬರುತ್ತೇನೆ. ವಿಮಾನ ಟಿಕೆಟ್ ಸಹ ಖರೀದಿಸಿದ್ದೇನೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾನೆ.


ನಾನು ಭಾರತ ಬಿಟ್ಟು ಬರಬಾರದಿತ್ತು. ಆದರೆ, ಅಲ್ಲಿ ಉದ್ಭವವಾದ ಪರಿಸ್ಥಿತಿಗಳು ನನ್ನನ್ನು ದೇಶ ಬಿಡುವಂತೆ ಮಾಡಿದವು. ಆದರೀಗ ನನ್ನ ದೇಶಕ್ಕೆ ಬಂಧು ಅಲ್ಲಿಯೇ ಇದ್ದು ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇನೆ. ನನ್ನನ್ನು ಹೆದರಿಸಿ ಹಣ ಪಡೆದವರ ಹೆಸರುಗಳು ಎಷ್ಟು ನೆನೆಪಿವೆಯೋ ಅವರೆಲ್ಲರ ಹೆಸರು ಪಟ್ಟಿ ಮಾಡಿದ್ದೇನೆ. ಅದನ್ನು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.



ಇದೇ ವೇಳೆ ತನ್ನ ಬಳಿಯಿರುವ ಸ್ಥಿರಾಸ್ತಿ, ಚರಾಸ್ತಿಗಳನ್ನು ಬಳಸಿ ಹಣವನ್ನು ಹಿಂದಿರುಗಿಸುತ್ತೇನೆ.  ನಾನು ಭಾರತಕ್ಕೆ ಬರುತ್ತೇನೆ. ನನಗೆ ನ್ಯಾಯಾಂಗದ ಬಗ್ಗೆ ಭರವಸೆಯಿದೆ ಎಂದು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.