ದಲಿತರಿಗೆ ತೊಂದರೆಯಾದರೆ ಸಹಿಸಲ್ಲ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ದಲಿತರನ್ನು ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಊಹಿದರೆ ಅದನ್ನು ಸಹಿಸುವುದಿಲ್ಲ.
ತುಮಕೂರು: ಸಮಾಜದಲ್ಲಿ ದಲಿತರಿಗೆ ಯಾವುದೇ ರೀತಿಯ ದಕ್ಕೆ ಬಂದರೆ ದಲಿತ ಸಮುದಾಯ ಪ್ರತಿನಿಧಿಸುವ ನಾನು ಸುಮ್ಮನಿಸುರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಸೆ.20ರಂದು ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ದಲಿತರನ್ನು ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಊಹಿದರೆ ಅದನ್ನು ಸಹಿಸುವುದಿಲ್ಲ. ನಾನು ದಲಿತ ಸಮುದಾಯವನ್ನು ಪ್ರತಿನಿಧಿಸಿ ಉಪಮುಖ್ಯಮಂತ್ರಿಯಾಗಿದ್ದೇನೆ. ದಲಿತರಿಗೆ ಯಾವುದೇ ರೀತಿ ತೊಂದರೆಯಾದರೆ ಅವರ ಪರ ನಾನು ನಿಲ್ಲುತ್ತೇನೆ. ಅದಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.
ಸಮಾಜದಲ್ಲಿ ಶೋಷಿತ ಸಮುದಾಯದವರನ್ನು ಕೆಳಸ್ಥರದಿಂದ ಕಾಣಲಾಗುತ್ತಿದೆ. ಯಾರೂ ಕೆಳಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಈ ಜಾತಿ ವ್ಯವಸ್ಥೆ ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ದೇಶ ಅಭಿವೃದ್ಧಿಯಾಗಲು ತೊಡಕಾಗಿರುವುದೇ ಈ ಜಾತಿ ವ್ಯವಸ್ಥೆಯಿಂದ. ಈ ವ್ಯವಸ್ಥೆ ಇರದಿದ್ದರೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಮ್ಮ ದೇಶ ಇರುತ್ತಿತ್ತು ಎಂದರು.
ದಲಿತ ಜಾತಿ ಹುಡುಗ ಅಂತರ್ಜಾತಿ ವಿವಾಹವಾದರೆ ಮರ್ಯಾದ ಹತ್ಯೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಮುಂದಾದರೂ ಈ ವ್ಯವಸ್ಥೆ ತೊಲಗಿ, ಮುಂದಿನ ಪೀಳಿಗೆ ಈ ಶೋಷಣೆಯಿಂದ ಮುಕ್ತವಾಗಬೇಕು. ಶಿಕ್ಷಣದಿಂದ ಮಾತ್ರ ಈ ವ್ಯವಸ್ಥೆ ಬುಡಮೇಲು ಮಾಡಲು ಸಾಧ್ಯ. ಈ ಜನಾಂಗದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಮೇಲ್ಮಟ್ಟಕ್ಕೇರಿಸಬೇಕು ಎಂದರು.