ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಅದಕ್ಕೂ ಮುನ್ನವೇ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಮೂಡ್‌ಗೆ ಜಾರಿದ್ದು, ರಾಷ್ಟ್ರ ನಾಯಕರ ಆಗಮನದಿಂದ ಉತ್ಸಾಹ ದ್ವಿಗುಣಗೊಂಡಿರುವ ಜೊತೆಗೆ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ಆರೋಪ-ಪ್ರತ್ಯಾರೋಪ ವಾಗ್ಯುದ್ಧಕ್ಕೆ ಮುಂದಾಗಿವೆ.


COMMERCIAL BREAK
SCROLL TO CONTINUE READING

2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections) ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮದೇ ರೀತಿಯಲ್ಲಿ ಚುನಾವಣಾ ಕದನಕ್ಕೆ ತಾಲೀಮು ನಡೆಸಲು ಸಿದ್ಧತೆ ನಡೆಸಿವೆ. ಚುನಾವಣೆ ತಯಾರಿಗೆ ಡೆಲ್ಲಿ ನಾಯಕರ ರಾಜ್ಯ ಪ್ರವಾಸ ಕೂಡ ನಿಗದಿ ಆಗುತ್ತಿದ್ದು, ರಾಜ್ಯ ನಾಯಕರಿಗೆ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧದ ಅಸ್ತ್ರಗಳನ್ನ ತಯಾರು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದಾರೆ.


ಇದನ್ನೂ ಓದಿ- ಕುದುರೆ-ಹಸುಗೆ ಸಿಕ್ಕ ಮನ್ನಣೆ ಕಪ್ಪು ಬಣ್ಣದ ಕಂಬಳದ ಕೋಣನಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ- ಬಿ ಕೆ ಹರಿಪ್ರಸಾದ್


ಬಿಜೆಪಿ-ಕಾಂಗ್ರೆಸ್ ಡೆಲ್ಲಿ ನಾಯಕರ ರಾಜ್ಯ ಪ್ರವಾಸ: ಚುನಾವಣೆ ಕ್ಲಾಸ್ ನಡೆಸಲಿದ್ದಾರೆ ಶಾ-ರಾಗಾ!
ಬಿಜೆಪಿ ಚುನಾವಣೆ ತಯಾರಿ; ಪಾಂಚಜನ್ಯ ಊದಲು ಅಮಿತ್ ಶಾ ರಾಜ್ಯಕ್ಕೆ ಭೇಟಿ:

ಚುನಾವಣೆ ರಣಕಹಳೆ ಊದಲು ಬಿಜೆಪಿಯ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಏಪ್ರಿಲ್ 1ರಂದು ಭೇಟಿ ನೀಡುತ್ತಿದ್ದಾರೆ. ಮೊದಲಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಕಮಲ ನಾಯಕರ ಜತೆ ಸಭೆ ನಡೆಸಲಿದ್ದಾರೆ. ರಾಜ್ಯ ಚುನಾವಣೆ ತಯಾರಿ ಹಾಗೂ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಬತ್ತಳಿಕೆಯಲ್ಲಿ ಬಿಜೆಪಿ ವಿರುದ್ಧ ಯಾವ ಅಸ್ತ್ರಗಳಿವೆ ಎಂಬ ಮಾಹಿತಿಯನ್ನು ಈಗಾಗಲೇ ಬಿಜೆಪಿ ಕಲೆಹಾಕಿದ್ದು, ಇವರ ಅಸ್ತ್ರಗಳ ವಿರುದ್ಧ ಹೋರಾಡಲು ಕಮಲ ಪಾಳಯ ಕಸರತ್ತು ಆರಂಭಿಸಿದೆ.


ಕಾಂಗ್ರೆಸ್ ಪಕ್ಷ ಸಂಘಟನೆ, ಬಲವರ್ಧನೆಗೆ ಕಸರತ್ತು:
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸಕ್ಕೂ ಒಂದು ದಿನ ಮುನ್ನವೇ ಅಂದರೆ ಮಾರ್ಚ್ 31ಕ್ಕೆ ರಾಜ್ಯಕ್ಕೆ ಆಗಮಿಸುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಕೈಗೊಂಡಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಮಾರ್ಚ್ 31ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಪಂಚರಾಜ್ಯ ಚುನಾವಣೆ ಸೋಲು ಹಾಗೂ ಪಕ್ಷದಲ್ಲಿ ಸಂಘಟನೆ-ಬ್ಲಾಕ್ ಕಾಂಗ್ರೆಸ್ ಬಲವರ್ಧನೆ ಸೇರಿದಂತೆ 2023ರ ಚುನಾವಣೆಗೆ ಸಿದ್ಧತೆಗಳನ್ನ ಕಾಂಗ್ರೆಸ್ ಕೈಗೊಳ್ಳುತ್ತಿದೆ.


ಇದನ್ನೂ ಓದಿ- 'ಶೋಷಿತರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು' : ಗೋವಿಂದ ಕಾರಜೋಳ


ಒಟ್ಟಾರೆ, ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections) 2023ರ ಮೇ ತಿಂಗಳಲ್ಲಿ ನಡೆಯಲಿದ್ದು, ಒಂದು ವರ್ಷ ಮುನ್ನವೇ ರಾಷ್ಟ್ರೀಯ ಪಕ್ಷಗಳು ಶತಾಯಗತಾಯ ಅಧಿಕಾರ ಹಿಡಿಯಲು ಸಕಲ ಸಿದ್ಧತೆ ನಡೆಸುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ಪಕ್ಷಗಳು ತಮ್ಮ ಪ್ರತಿಪಕ್ಷಗಳ ವಿರುದ್ಧ ಹಲವು ಬಗೆಯ ಆರೋಪ ಮಾಡಿ ಜನತೆಯ ಗಮನ ಸೆಳೆಯುವ ಯೋಜನೆ ಹಾಕಿಕೊಂಡಿವೆ. ರಾಜ್ಯದ ಜ್ವಲಂತ ಸಮಸ್ಯೆಗಳು ಕೇವಲ ಚುನಾವಣೆಯ ಭಾಷಣಕ್ಕೆ ಸೀಮಿತವಾಗದೆ, ಪರಿಹಾರ ಸಿಗಲಿದೆಯಾ ಕಾದು ನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.