ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿ, ಅಧಿಕೃತ ಘೋಷಣೆ ಬಾಕಿ
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕದ ಬಗ್ಗೆ ಬರೋಬ್ಬರಿ ಐದು ಗಂಟೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಹುರಿಯಾಳುಗಳ ಪಟ್ಟಿ ಸಿದ್ಧಗೊಂಡಿದ್ದು ಅಧಿಕೃತ ಪ್ರಕಟಣೆ ಬಾಕಿ ಇದೆ.
ಮಂಗಳವಾರವೇ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕದ ಬಗ್ಗೆ ಬರೋಬ್ಬರಿ ಐದು ಗಂಟೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದೆ. ಆದರೆ ಒಂದು, ಎರಡು ಮತ್ತು ಮೂರನೇ ಹಂತದಲ್ಲಿ ಚುನಾವಣೆ ನಡೆಯುವ ಇತರೆ ರಾಜ್ಯಗಳ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಿ ಒಟ್ಟಿಗೆ ಅಧಿಕೃತವಾಗಿ ಪ್ರಕಟಿಸುವ ದೃಷ್ಟಿಯಿಂದ ಘೋಷಣೆ ವಿಳಂಬವಾಗಿದೆ.
ಕರ್ನಾಟಕದ ವಿಚಾರವಾಗಿ ಕೆಲ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಈ ವಿರೋಧದ ನಡುವೆಯೂ ಹಾಲಿ ಸಂಸದರೆಲ್ಲರಿಗೂ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಇದಲ್ಲದೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಬೇಕೋ ಬೇಡವೋ ಎಂಬ ಬಗ್ಗೆಯೂ ಚರ್ಚೆಯಾಗಿದೆ. ಯಾವುದಕ್ಕೂ ಇರಲಿ ಎಂದು ನಾಮಪತ್ರ ಸಲ್ಲಿಸಿ ಕಡೆಗಳಿಗೆಯಲ್ಲಿ ವಾಪಸ್ ತೆಗಿಸುವ ಸಲಹೆಗಳು ಕೇಳಿಬಂದಿವೆ. ಇದೇ ರೀತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಲ್ಲಿ ನಿಂತರೆ ಏನು ಮಾಡಬೇಕೆಂಬುದಾಗಿಯೂ ಚರ್ಚೆಯಾಗಿದೆ. ದೇವೇಗೌಡರು ತುಮಕೂರಿನಿಂದ ಅಖಾಡಕ್ಕೆ ಇಳಿದರೆ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನೇ ಬಿಜೆಪಿಗೆ ಕರೆತಂದು ಕಣಕ್ಕಿಳಿಸುವ ಬಗ್ಗೆ ಚರ್ಚೆಯಾಗಿದೆ.
ಸಂಭವನೀಯರ ಪಟ್ಟಿ:
ಬೆಂಗಳೂರು ಗ್ರಾಮಾಂತರ- ನಿಶಾ ಯೋಗೇಶ್ವರ್
ಬೆಂಗಳೂರು ದಕ್ಷಿಣ- ತೇಜಸ್ವಿನಿ ಅನಂತಕುಮಾರ್
ಬೆಂಗಳೂರು ಕೇಂದ್ರ- ಪಿ.ಸಿ. ಮೋಹನ್
ಬೆಂಗಳೂರು ಉತ್ತರ- ಡಿ.ವಿ. ಸದಾನಂದಗೌಡ
ಚಾಮರಾಜನಗರ -ಶ್ರೀನಿವಾಸಪ್ರಸಾದ್
ಮೈಸೂರು, ಕೊಡಗು -ಪ್ರತಾಪ ಸಿಂಹ
ಹಾಸನ -ಎ. ಮಂಜು
ಉಡುಪಿ, ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
ದಕ್ಷಿಣ ಕನ್ನಡ -ನಳೀನ್ ಕುಮಾರ್ ಕಟೀಲ್
ಶಿವಮೊಗ್ಗ -ಬಿ.ವೈ. ರಾಘವೇಂದ್ರ
ಉತ್ತರ ಕನ್ನಡ -ಅನಂತಕುಮಾರ್ ಹೆಗಡೆ
ಬೆಳಗಾವಿ - ಸುರೇಶ್ ಅಂಗಡಿ
ಚಿಕ್ಕೋಡಿ- ರಮೇಶ್ ಕತ್ತಿ
ವಿಜಾಪುರ- ರಮೇಶ್ ಜಿಗಜಿಣಗಿ
ಬಾಗಲಕೋಟೆ- ಪಿ.ಸಿ. ಗದ್ದೀಗೌಡರ್
ಹಾವೇರಿ- ಶಿವಕುಮಾರ್ ಉದಾಸಿ
ಹುಬ್ಬಳ್ಳಿ ಧಾರವಾಡ- ಪ್ರಹ್ಲಾದ್ ಜೋಷಿ
ದಾವಣಗೆರೆ- ಜಿ.ಎಂ. ಸಿದ್ದೇಶ್ವರ್
ಚಿತ್ರದುರ್ಗ- ಎ. ನಾರಾಯಣಸ್ವಾಮಿ
ಕೊಪ್ಪಳ- ಕರಡಿ ಸಂಗಣ್ಣ
ರಾಯಚೂರು- ಅಮರೇಶ್ ನಾಯಕ್
ಬಳ್ಳಾರಿ- ದೇವೇಂದ್ರಪ್ಪ
ಬೀದರ್- ಭಗವಂತ ಖೂಬಾ
ಕಲ್ಬುರ್ಗಿ- ಉಮೇಶ್ ಜಾಧವ್
ಕೋಲಾರ- ಛಲವಾದಿ ನಾರಾಯಣಸ್ವಾಮಿ
ಚಿಕ್ಕಬಳ್ಳಾಪುರ- ಬಚ್ಚೇಗೌಡ
ತುಮಕೂರು- ಜಿ.ಎಸ್. ಬಸವರಾಜು