ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಯ ಕಾರಣ ರಾಜ್ಯದ ಕುತೂಹಲದ ಕೇಂದ್ರವಾಗಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರು ನಗರದ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಗಳ (Sira, R R Nagar constituencies) ಉಪಚುನಾವಣೆ (By Election) ಮತದಾನ ನಡೆಯುತ್ತಿದೆ. ಎರಡೂ ಕ್ಷೇತ್ರಗಳಲ್ಲು ಬಿರುಸಿನ ಮತದಾನ ನಡೆಯುತ್ತಿದೆ.   


COMMERCIAL BREAK
SCROLL TO CONTINUE READING

ಆರ್ ಆರ್ ನಗರ ಚಿತ್ರಣ :
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ (RR Nagar Assembly constituency) ಆರಂಭದ ವೇಳೆ ಮತದಾನ (Voting) ಚುರುಕು ಪಡೆದಿತ್ತು. ಭಾರೀ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು ಮತದಾನ ನಡೆಸಿದರು. ಬೆಳಿಗ್ಗೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆಗೆ ಕಾಯುತ್ತಿರುವ ದೃಶ್ಯ ಕಂಡು ಬಂತು.


ಜ್ಞಾನಭಾರತಿ ವಾರ್ಡ್ ನ ಮತಗಟ್ಟೆ 304ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತದಾನ ಮಾಡಿದರು. 
ಮತ್ತೊಂದೆಡೆ, ಬೆಳಿಗ್ಗೆಯೇ ಮಲ್ಲೇಶ್ವರಂನಲ್ಲಿ ರುವ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಮ್ಮಪ್ಪನ ದರ್ಶನ ಪಡೆದರು. 


ಕರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ:
ಈ ಮಧ್ಯೆ, ಮುಂಜಾನೆಯಿಂದಲೇ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮತಗಟ್ಟೆಗಳ ಪರಿಶೀಲನೆ ನಡೆಸಿದರು. ಆರ್ ಆರ್ ನಗರದ ಎಲ್ಲಾ ಮತಗಟ್ಟೆಗಳ ರೌಂಡ್ಸ್ ನಡೆಸುತ್ತಿರುವ ಚುನಾವಣಾಧಿಕಾರಿ, ಮತಗಟ್ಟೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು. 


ಇದೇ ವೇಳೆ ಮಾತನಾಡಿದ ಮಂಜುನಾಥ್  ಪ್ರಸಾದ್, ಅಣಕು ಮತದಾನ ಮಾಡಿದ ನಂತರ ಮತದಾನಕ್ಕೆ ಅವಕಾಶ ನೀಡಲಾಯಿತು ಎಂದು ಹೇಳಿದರು.  ಅಣಕು ಮತದಾನದ ನಂತರ 9 ಕಂಟ್ರೋಲ್ ಯುನಿಟ್ ಬದಲಾಯಿಸಿದ್ದು, 3 ವಿವಿ ಪ್ಯಾಟ್ ಗಳನ್ನು ಬದಲಾಯಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಕರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 5 ಗಂಟೆಯಿಂದ 6  ಗಂಟೆವರೆಗೆ ಕರೋನಾ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸೋಂಕಿತರಿಗೂ ಕರೆ ಮಾಡಿದ್ದು ಅದರಲ್ಲಿ 27 ಮಂದಿ ಮಾತ್ರ ಮತದಾನ ಮಾಡಲು ಒಪ್ಪಿದ್ದಾರೆ ಎಂದು ಮಂಜುನಾಥ್ ಹೇಳಿದ್ದಾರೆ.


ವಿಜಯೇಂದ್ರ ಆಟ ನಡೆಯುತ್ತದೋ, ನಮ್ಮ ಆಟ ನಡೆಯುತ್ತದೋ ನೋಡೋಣ-ಹೆಚ್ ಡಿಕೆ ಗುಡುಗು
 
ಮತಗಟ್ಟೆಗಳ  ಎದುರು ಭಾರೀ ಸಂಖ್ಯೆಯ ಕಾರ್ಯಕರ್ತರು :
ಇದೇ ವೇಳೆ ಆರ್ ಆರ್ ನಗರ ಕ್ಷೇತ್ರದ ಮತಗಟ್ಟೆಯ ದುರು ಬಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು, ಕಾರ್ಯಕರ್ತರನ್ನು ಪೊಲೀಸರು ಚದುರಿಸಬೇಕಾಯಿತು. ಎಲ್ಲಾ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.


ಶಿರಾ ಕ್ಷೇತ್ರದ ಚಿತ್ರಣ :
ಶಿರಾದಲ್ಲೂ ಬಿರುಸಿನ ಮತದಾ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  ಶಿರದ ಬಾಲಕಿಯರ ಕಾಲೇಜಿನಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಕಿ ಮತಗಟ್ಟೆಗಳಿಗೆ ಸ್ವಾಗತ ಕೋರಲಾಗಿದೆ.  


#ಉತ್ತರಕೊಡಿ_ಬಿಎಸ್‌ವೈ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್


ಕರೋನಾ (Covid 19) ಹಿನ್ನೆಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ. ಮತಕೇಂದ್ರಗಳಲ್ಲಿ ಮತದಾರರ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿದೆ. ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರ  ಕೈ ಸ್ಯಾನಿಟೈಸ್ ಮಾಡಿ ಗ್ಲೌಸ್ ಹಾಕಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೂ ಆರೋಗ್ಯ ಸಿಬ್ಬಂದಿ ಗ್ಲೌಸ್ ವಿತರಿಸುತ್ತಿದ್ದಾರೆ. 


ಶಿರಾ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿಯಾಗಿ  ಟಿ . ಬಿ.  ಜಯಚಂದ್ರ, ಬಿಜೆಪಿ ಉಮೇದುದಾರರಾಗಿ ಡಾ. ರಾಜೇಶ್ ಗೌಡ  ಅಖಾಡದಲ್ಲಿದ್ದಾರೆ.  ಅಭ್ಯರ್ಥಿಗಳ ಪರವಾಗಿ ಘಟಾನುಘಟಿ ನಾಯಕರಿಂದಲೇ ಪ್ರಚಾರ ನಡೆದಿತ್ತು. ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತಬೇಟೆ ನಡೆಸಿದ್ದರು. 

ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಮತ್ತೊಂದು ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.  ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ  ಮುನಿರತ್ನಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಪ್ರಬಲ ಸವಾಲು ಒಡ್ಡಿದ್ದಾರೆ. ಜೆಡಿಎಸ್ ನ ವಿ ಕೃಷ್ಣ ಮೂರ್ತಿ ಕೂಡಾ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ದಿಗ್ಗಜ ನಾಯಕರಾದ ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಪ್ರಚಾರದಿಂದಾಗಿ ಆರ್ ಆರ್ ನಗರ ಕೂಡಾ ರಂಗೇರಿತ್ತು. ನವೆಂಬರ್ ಹತ್ತರಂದು ಫಲಿತಾಂಶ (Result) ಪ್ರಕಟವಾಗಲಿದೆ.