ಬೆಂಗಳೂರು: ಚುನಾವಣಾ ಆಯೋಗದ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ಬಾರಿಯ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ ರಾಹುಲ್ ದ್ರಾವಿಡ್ ನಿವಾಸವನ್ನು ಬದಲಾಯಿಸಿದ್ದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಲ್ಲ ಎಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸಂಜೀವ್ ಕುಮಾರ್ ಅವರ ಪ್ರಕಾರ, ದ್ರಾವಿಡ್ ಅವರ ನಿವಾಸವನ್ನು ಸ್ವಲ್ಪ ಹಿಂದೆಯೇ ಬದಲಾಯಿಸಿದ್ದರು. ನಗರದ ಶಾಂತಿನಗರದಲ್ಲಿ ವಾಸವಿದ್ದ ರಾಹುಲ್ ದ್ರಾವಿಡ್ ಕುಟುಂಬ ಸ್ವಲ್ವ ಸಮಯದ ಹಿಂದೆಯಷ್ಟೇ ಮತ್ತಿಕೆರೆಯ ಅಶ್ವತ್ಥನಗರಕ್ಕೆ ಸ್ಥಳಾಂತರಗೊಂಡಿದ್ದು, ಮಾರ್ಚ್ 16ಕ್ಕೂ ಮುಂಚಿತವಾಗಿ ರಾಹುಲ್ ಫಾರ್ಮ್ 6 ಅನ್ನು ನೀಡಿದ್ದಾರೆ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದಿತ್ತು. ಆದರೆ, ನೂತನ ವಿಳಾಸದಲ್ಲಿ ರಾಹುಲ್ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿರದ ಕಾರಣ ಅವರು ಈ ಬಾರಿ ಚುನಾವಣೆಯಲ್ಲಿ ಅವರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದಿದ್ದಾರೆ.


ರಾಹುಲ್ ದ್ರಾವಿಡ್ ಸಹೋದರ ಶಾಂತಿನಗರ ವ್ಯಾಪ್ತಿಯ ಚುನಾವಣಾಧಿಕಾರಿಗೆ ಫಾರ್ಮ್ 7 ಅನ್ನು ನೀಡಿ ಮತದಾರರ ಪಟ್ಟಿಯಿಂದ ರಾಹುಲ್ ದ್ರಾವಿಡ್ ಹೆಸರನ್ನು ಕೈ ಬಿಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿನಗರದಲ್ಲಿ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.


ದ್ರಾವಿಡ್ ಅವರ ನೂತನ ನಿವಾಸಕ್ಕೆ ಚುನಾವಣಾಧಿಕಾರಿಗಳು ಹಲವು ಬಾರಿ ಭೇಟಿ ನೀಡಿದ್ದರು ಎಂಬುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ದೃಢಪಡಿಸಿದೆ. ಆದರೆ ಆ ವೇಳೆ ರಾಹುಲ್ ದ್ರಾವಿಡ್ ವಿದೇಶ ಪ್ರವಾಸದಲ್ಲಿದ್ದ ಕಾರಣ ಹೆಸರು ಸೇರ್ಪಡೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.