ತುಮಕೂರು: ರಾಜ್ಯದಲ್ಲಿ ಡ್ರಗ್ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಂಡಿದ್ದು, ತುಮಕೂರಿನ ವಿಶ್ವವಿದ್ಯಾಲಯ ಕೂಡ ಮಾದಕ ದ್ರವ್ಯ ಮುಕ್ತ ವಿಶ್ವವಿದ್ಯಾಲಯ ಎಂದು ಘೋಷಿಸಿಕೊಳ್ಳುವತ್ತ ಮುಂದಾಗಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 


COMMERCIAL BREAK
SCROLL TO CONTINUE READING

ತುಮಕೂರು ವಿಶ್ವವಿದ್ಯಾಲಯದಿಂದ ಸ್ಥಾಪಿಸಿರುವ ಸಾಂಸ್ಕೃತಿಕ ನಾಯಕ ಜುಂಗಪ್ಪ, ಜ್ಞಾನಪೀಠ ಪುರಸ್ಕೃತ ಕುವೆಂಪು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ನೀರಾವರಿ ತಜ್ಞ ಜಿ. ಪರಮಶಿವಯ್ಯ ಅವರ ಪೀಠಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರಗ್ ಹಾವಳಿಯಿಂದ ವಿದ್ಯಾರ್ಥಿಗಳ ಜೀವನ ಹಾಗೂ ಇಡೀ ಕಾಲೇಜಿಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ನಿಯಂತ್ರಣಕ್ಕೆ ಕಠಿಣ ನಿಲುವು ತೆಗೆದುಕೊಂಡಿದ್ದೇವೆ ಎಂದರು. 


ನಾನು ಓದಿರುವ ಕಾಲೇಜು ಇಂದು ವಿಶ್ವವಿದ್ಯಾಲಯ ಆಗಿದೆ: 
ನಾನು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೇ ಪ್ರತ್ಯೆಕ ವಿಶ್ವವಿದ್ಯಾಲಯ ತೆರೆದೆ. ಆದರೆ, ಈ 15 ವರ್ಷಗಳಿಂದ ವಿಶ್ವವಿದ್ಯಾಲಯ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ವಿಶ್ವವಿದ್ಯಾಲಯ ಸೈಂಟಿಫಿಕ್ ಸೆಂಟರ್ ಆಗಬೇಕು ಎಂಬ ಕಲ್ಪನೆ ಇತ್ತು. ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಶಿಕ್ಷಣ ಸಿಗಬೇಕು ಎಂಬ ಆಲೋಚನೆಯಾಗಿತ್ತು. ಇದೇ ಹಾದಿಯಲ್ಲಿ ತುಮಕೂರು ವಿಶ್ವವಿದ್ಯಾಲಯ ನಾಲ್ಕು ಪೀಠ ತೆರೆದು ಮತ್ತೊಂದು ಹೆಜ್ಜೆ ಇಟ್ಟಿದೆ. ಜುಂಜಪ್ಪ ಅವರು ನಮ್ಮ ಜಿಲ್ಲೆಯವರು. ಅವರ ಮಾತುಗಳ ಮೂಲಕ ಅನೇಕ ಸಂದೇಶ ನೀಡಿದ್ದಾರೆ. ಅವರ ಪೀಠ ಸ್ಥಾಪನೆ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.


ಈ ನಾಲ್ಕು ಜನರು ಸಮಾಜದಲ್ಲಿ ಅವರದೇ ಕ್ಷೇತ್ರದಲ್ಲಿ ಸಾಧನೆಗೈದು ಹಲವು ವಿಚಾರಗಳನ್ನು ನಮಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಪೀಠ ಸ್ಥಾಪನೆ ಯುವ ಪೀಳಿಗೆಗೆ ಮಾರ್ಗದರ್ಶವಾಗಲಿದೆ. 


ಶಿಕ್ಷಣ ಕ್ಷೇತ್ರ ಬಹಳ ಬದಲಾಗಿದೆ. ಹಿಂದೆ ಶಿಕ್ಷಣದಲ್ಲಿ ಅವಕಾಶ ಕಡಿಮೆ ಇತ್ತು. ಆದರೆ ಇಂದು ಅವಕಾಶ ಕೊರತೆ ಇಲ್ಲ. ಯಾವ ವಿಶ್ವವಿದ್ಯಾಲಯದಲ್ಲಾದರೂ ದಾಖಲಾತಿ ಪಡೆಯುವ ಅವಕಾಶವಿದೆ. ನಾಸಾದಲ್ಲಿ ಶೇ.30 ರಷ್ಟು ಭಾರತೀಯರೇ ಇದ್ದಾರೆ. ಎಲ್ಲೆಡೆ ಭಾರತೀಯರೇ ಅವಕಾಶ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಪ್ರತಿ ಸರಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ ಎಂದರು. 


ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.