ಬೆಂಗಳೂರು: ಇಡೀ ವಿಶ್ವವೇ ಕೊರೊನಾವೈರಸ್  (Coronavirus)  ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದುಕೊಂಡು ಮೋಜು ಮಸ್ತಿಯಲ್ಲಿದ್ದ ಡಾ. ಕೆ. ಸುಧಾಕರ್ ರಾಜೀನಾಮೆ ನೀಡಲಿ ಎಂದು ವಿರೋಧ ಪಕ್ಷದವನಾಗಿ ನಾನು ಒತ್ತಾಯಿಸುವುದಿಲ್ಲ. ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಕುಟುಂಬದೊಂದಿಗೆ ಜಾಲಿ ಮೂಡಿನಲ್ಲಿರುವ ಫೊಟೋವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar)  ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿ ನಂತರ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಲೀಟ್ ಮಾಡಿದ್ದರು. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ನಮಗೆ ಅಚ್ಚರಿಯಾಗಿದೆ ಎಂದಿದ್ದಾರೆ.


Covid-19 ಅಟ್ಟಹಾಸದ ನಡುವೆ ಈಜುಕೊಳದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಮೋಜು, ನೆಟ್ಟಿಗರ ಅಕ್ರೋಶ


ಡಿ.ಕೆ. ಶಿವಕುಮಾರ್ ಮತ್ತು ಸುಧಾಕರ್ ಮೊದಲಿಂದಲೂ ಎಣ್ಣೆ-ಸೀಗೆಕಾಯಿ ಇದ್ದಂತೆ. ಇಬ್ಬರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (SM Krishna) ಅವರ ಶಿಷ್ಯರಾಗಿದ್ದರೂ, ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಅವರ ಸಂಬಂಧ ಅಷ್ಟಕ್ಕಷ್ಟೇ. ಡಿ.ಕೆ. ಶಿವಕುಮಾರ್ ಪ್ರತಿನಿಧಿಸು  ಕನಕಪುರಕ್ಕೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನು ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಂಡೊಯ್ದ ಮೇಲೆ ಇವರಿಬ್ಬರ ನಡುವಿನ ಗುದ್ದಾಟ ಇನ್ನಷ್ಟು ಹೆಚ್ಚಾಗಿತ್ತು. ಈಗ ಸುಧಾಕರ್ ಬೇಜವಬ್ದಾರಿತನ ಇಟ್ಟುಕೊಂಡು ಅವರು‌ ರಾಜೀನಾಮೆ ನೀಡಲಿ ಎಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಡಿ.ಕೆ. ಶಿವಕುಮಾರ್.


ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಜನರನ್ನು ಮನೆಯೊಳಗೆ ಬಂಧಿಯಾಗುವಂತೆ ಹೇಳಲಾಗುತ್ತಿದೆ. ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಕೊರೋನಾ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಈ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ ಎಂದು ಡಿ.ಕೆ‌. ಶಿವಕುಮಾರ್ ಹೇಳಿದ್ದಾರೆ. 


ರೈತರರನ್ನು ಕೈಬಿಡಬೇಡಿ: ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಡಿ.ಕೆ.‌ ಶಿವಕುಮಾರ್ ಮನವಿ


ಈ ವಿಚಾರವಾಗಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ. ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.  ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ಸುಧಾಕರ್ ಅವರನ್ನು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.


ಅಲ್ಲದೆ ಇದು ಕೊರೋನಾ ವೈರಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿರುವ ಸಚಿವರೊಬ್ಬರ ನಡೆ, ನೈತಿಕ ಹೊಣೆಗಾರಿಕೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕಿಂತ ಬಿಜೆಪಿಯ ಹೈಕಮಾಂಡ್ ಏನು ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. ಈ ವಿಚಾರವನ್ನು ಬಿಜೆಪಿ ಹೈಕಮಾಂಡಿಗೆ ಬಿಡುತ್ತೇನೆ ಎಂದಿದ್ದಾರೆ.