ನವದೆಹಲಿ: ಮಂಡ್ಯದ ಜನತೆ ನೀರಿಗಾಗಿ ಸಾಕಷ್ಟು ಪ್ರತಿಭಟನೆಗಳನ್ನು ಮಾಡಿದರೂ ಸಂಸದೆ ಸುಮಲತಾ ಕ್ಯಾರೆ ಅನ್ನಲಿಲ್ಲ ಎಂದಿದ್ದವರಿಗೆ ಇಂದು ಸಂಸತ್ತಿನಲ್ಲಿ ಮಂಡ್ಯ ಜಿಲ್ಲೆಯ ಸಮಸ್ಯೆಗಳನ್ನು ಎಳೆ ಎಳೆಯಾಗಿ ವಿವರಿಸುವ ಮೂಲಕ ಸುಮಲತಾ ಅವರು ಎಲ್ಲರ ಗಮನ ಸೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಸಂಸದೆಯಾದ ಬಳಿಕ ಮೊದಲ ಬಾರಿಗೆ ಸಂಸತ್ ಅಧಿವೇಶನದಲ್ಲಿ ಭಾಷಣ ಮಾಡಿದ ಸುಮಲತಾ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿ, "ಮೊದಲಿಗೆ ನನ್ನ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು" ಎಂದು ಹೇಳಿದರು. ಬಳಿಕ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಂಡ್ಯದ ರೈತರು ಮತ್ತು ನೀರಿನ ಸಮಸ್ಯೆಗಳನ್ನು ವಿವರಿಸುತ್ತಾ ಗಮನ ಸೆಳೆದರು.


"ಜಿಲ್ಲೆಯ ರೈತರು ಮಲೆಯಿಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಳೆಗಳಿಗೆ ನೀರಿಲ್ಲದೆ ಇಳುವರಿಯಿಲ್ಲದ ಕಾರಣ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಕೃಷಿ ಉತ್ಪನ್ನಗಳಿಗೆ ಅಸಮರ್ಪಕ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳು ಬಾಕಿ ಮರುಪಾವತಿ ನೀಡದೆ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಇದು ನೂರಾರು ರೈತರ ಆತಮ್ಹತ್ಯೆಗೆ ಕಾರಣವಾಗಬಹುದು.ರಾಜ್ಯ ಸರ್ಕಾರದ ಸಾಲ ಮನ್ನಾ ಭರವಸೆ ಸಹ ಫಲ ನೀಡಿಲ್ಲ. ಹೀಗಾಗಿ ಈ ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಜಲ ಸಂಪನ್ಮೂಲ ಸಚಿವರು ಗಮನಹರಿಸಿ ರೈತರ ಸಮಸ್ಯೆಗಳನ್ನು ನಿವಾರಿಸಬೇಕು" ಎಂದು ಸುಮಲತಾ ಸಂಸತ್ತಿನಲ್ಲಿ ಮನವಿ ಮಾಡಿದರು.


ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬೆಂಬಲ ಸೂಚಿಸಿತ್ತು. ತಮ್ಮ ಬುದ್ದಿವಂತಿಕೆ ಹಾಗೂ ನೇರ ಮಾತುಗಳಿಂದಲೇ ಜನರ ವಿಶ್ವಾಸ ಗಳಿಸಿದ ಸುಮಲತಾ ಅವರು, ಸಿಎಂ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಾವಿರಾರು ಮತಗಳ ಅಂತರದಿಂದ ಜಯಗಳಿಸಿ ಮಧ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.