ನವದೆಹಲಿ: ಬೆಳಂದೂರು ಕೆರೆ ಮಾಲಿನ್ಯದ ವಿಚಾರವಾಗಿ ರಾಜ್ಯ ಸರ್ಕಾರ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ್ದ ವರದಿಗೆ ಅರ್ಜಿದಾರ ಪರ ವಕೀಲ ರಾಮ್ ಪ್ರಸಾದ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಬೆಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ವಿಚಾರವಾಗಿ ತುರ್ತು ವಿಚಾರಣೆ ನಡೆಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹಸಿರು ನ್ಯಾಯಾಧಿಕರಣ ಅಲ್ಲಿನ ಮಾಲಿನ್ಯ ಮತ್ತು ಬೆಂಕಿ ಉಲ್ಬಣಕ್ಕೆ ಕಾರಣ ಕೋರಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆಆದೇಶ ನೀಡಿತ್ತು.


ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು  ಬೆಳಂದೂರು,ಅಗರ, ವರ್ತೂರು ಕೆರೆ ಶುದ್ದೀಕರಣ ವಿಚಾರವಾಗಿ ಹಸಿರು ನ್ಯಾಯಧಿಕರಣಕ್ಕೆ ಕ್ರಿಯಾ ವರದಿಯನ್ನು ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರ ಸಲ್ಲಿಸಿದ ವರದಿಯಲ್ಲಿ ಕೆರೆಗಳ‌ ಜಲಾನಯನ ಪ್ರದೇಶದಲ್ಲಿನ ಘನ ತ್ಯಾಜ್ಯದ ನಿರ್ವಹಣೆ ಉಲ್ಲೇಖವಿಲ್ಲ, ಅಲ್ಲದೆ ಮೈಕ್ರೊಫೈಟ್ ಗಳನ್ನು ತೆಗೆದಿರುವ ಕುರಿತಾಗಿ ನ್ಯಾಯಾಧಿಕರಣಕ್ಕೆ ಮಾಸಿಕ ವರದಿ ನೀಡಬೇಕು ಎನ್ನುವ ಸೂಚನೆಯನ್ನು ಕೂಡ ಸರಕಾರವು ಪಾಲಿಸಿಲ್ಲ ಎಂದು ಅರ್ಜಿ ಪರ ವಕೀಲ ರಾಮ್ ಪ್ರಸಾದ್ ನ್ಯಾಯಾಧಿಕರಣದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ಇದಕ್ಕೆ ಪ್ರತಿಕ್ರಯಿಸಿರುವ ನ್ಯಾಯಮೂರ್ತಿ ಜಾವೇದ್ ರಹಿಮ್ ನೇತೃತ್ವದ ಪೀಠ  ಶೀಘ್ರವಾಗಿ ವರದಿ ನೀಡುವಂತೆ ಹೇಳಿ ಏಪ್ರಿಲ್ 11 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.