ರಾಯಚೂರು: ಪ್ರತಿಷ್ಠೆಗಾಗಿ ಜನ ವೈಟ್‌ ಕಾಲರ್‌ ಕೆಲಸದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ, ಇದರಿಂದ  ಸಮಾಜದ ಅವಶ್ಯಕತೆಗಳನ್ನು ನೀಗಿಸಲು ಸಾಧ್ಯವಿಲ್ಲ. ಹಾಗಾಗಿ ಬ್ಲೂ ಕಾಲರ್ ಕೆಲಸ ಬಹಳ ಮುಖ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಯಚೂರಿನ ಸರ್ಕಾರಿ ಐಟಿಐ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಅಶ್ವತ್ಥನಾರಾಯಣ, "ಬ್ಲೂ ಕಾಲರ್‌ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹ ಹೆಚ್ಚಿನ ಒತ್ತು ನೀಡಿ, ಪ್ರೋತ್ಸಾಹ ನೀಡಿದ್ದಾರೆ. ಉದ್ಯೋಗಕ್ಕೆ ಪೂರಕವಾದ ವಿಷಯಗಳನ್ನು ಕಲಿಯುವ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.  ಐಟಿಐ ಶಿಕ್ಷಣ ಹೆಚ್ಚಿನ ಜನಪ್ರಿಯತೆ ಪಡೆಯಲು ನಮ್ಮೆಲ್ಲರ ಸಹಕಾರ ಅಗತ್ಯ.  ಸರ್ಕಾರದಿಂದ ಮಾತ್ರ ಈ ಕೆಲಸ ಆಗದು, ಐಟಿಐ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಮ್ಮೆಅಭಿಮಾನ ಇದ್ದಾಗ ಮಾತ್ರ ಇತರರಿಗೂ ಪ್ರೇರಣೆಯಾಗುವುದು,"ಎಂದರು.


"ಐಟಿಐ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅಥವಾ ಸ್ವಂತ ಉದ್ದಿಮೆ ಸ್ಥಾಪಿಸಲು ನಮ್ಮ ಸರ್ಕಾರ ಅಗತ್ಯ ನೆರವು ಒದಗಿಸಲು ಸಿದ್ಧ. ನಮ್ಮ ಸರ್ಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್‌, ಪ್ರಾಜೆಕ್ಟ್‌ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ.  ಉದ್ಯೋಗಕ್ಕೆ ಅಗತ್ಯ ಕೌಶಲ್ಯ ಕಲಿಯುಲು ಅವಕಾಶ ಕಲ್ಪಿಸಲಾಗುವುದು,"ಎಂದು ಮಾಹಿತಿ ನೀಡಿದರು.


ಐಟಿಐನಲ್ಲಿ ಸಂಭ್ರಮ!
ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರ ಭೇಟಿಯಿಂದ  ರಾಯಚೂರು ಐಟಿಐಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. 1958ರಲ್ಲಿ ಆರಂಭವಾದ ಕಾಲೇಜಿಗೆ ಮೊದಲ ಬಾರಿಗೆ ಸಚಿವರು ಭೇಟಿ ನೀಡಿದ್ದು ವಿದ್ಯಾರ್ಥಿಗಳ ಸಡಗರ ಹೆಚ್ಚಲು ಕಾರಣವಾಯಿತು. ಕಾಲೇಜಿನಲ್ಲಿ ಡಾ. ಅಶ್ವತ್ಥನಾರಾಯಣ ಅವರ ಜತೆ ಫೋಟೊ ತೆಗೆಸಿಕೊಂಡು ವಿದ್ಯಾರ್ಥಿಗಳು ಖುಷಿ ಪಟ್ಟರು.