ಮಂಗಳೂರು : ಪ್ರಾಜೆಕ್ಟ್ ಚೀತಾ ಯೋಜನೆಯಲ್ಲಿ ಈಗಾಗಲೇ ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತಂದಿರೋದು ನಿಮಗೆಲ್ಲಾ ಗೊತ್ತಾಗಿದೆ. ನಮೀಬಿಯಾದಿಂದ ಚೀತಾ ತರುವ ತಂಡದಲ್ಲಿ ಭಾರತೀಯ ಪಶುವೈದ್ಯರಾಗಿ ವನ್ಯಜೀವಿ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಸನತ್ ಕೃಷ್ಣ ಮುಳಿಯ ಕೂಡ ಪಾಲ್ಗೊಂಡಿದ್ದರು. ಅರಿವಳಿಕೆ ತಜ್ಞರಾಗಿರುವ ಸನತ್ ಕೃಷ್ಣ ರಾಜ್ಯದಲ್ಲಿ ನಡೆದಿರುವ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತಕ್ಕೆ ಚೀತಾ ಸಂತತಿ ಮರು ಪರಿಚಯಿಸುವ ಕಾರ್ಯಕ್ರಮದಡಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ವಿಶೇಷ ವಿಮಾನದ ಮೂಲಕ ಎಂಟು ಚೀತಾಗಳನ್ನು ಕರೆ ತರಲಾಗಿದೆ. ಎಂಟು ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಭಾರತದ ಏಕೈಕ ವನ್ಯಜೀವಿ ಅರಿವಳಿಕೆ ತಜ್ಞ ಕನ್ನಡಿಗರಾಗಿದ್ದು, ಅವರು ಕರ್ನಾಟಕದ ಪುತ್ತೂರಿನವರು ಎಂಬುದು ವಿಶೇಷ. ಪುತ್ತೂರಿನ ಪ್ರತಿಷ್ಠಿತ ಮುಳಿಯ ಮನೆತನದ ಸನತ್‌ ಕೃಷ್ಣ ಮುಳಿಯ ಅವರೇ ಈ ತಂಡದ ಪ್ರಮುಖ ವನ್ಯಜೀವಿ ಅರಿವಳಿಕೆ ತಜ್ಞರಾಗಿದ್ದಾರೆ. ಇನ್ನು ಸನತ್‌ ಕೃಷ್ಣ ಹುಲಿ ಹಾಗೂ ಆನೆಗೆ ರೇಡಿಯೋ ಕಾಲರ್‌ ಅಳವಡಿಕೆಯಲ್ಲಿ ಪರಿಣತ ತಜ್ಞ. ನುರಿತ ಅರಿವಳಿಕೆ ತಜ್ಞ ಕೂಡ.


ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಸಾಧ್ಯವಿಲ್ಲ : ಕೇರಳ ಸರ್ಕಾರಕ್ಕೆ ಸಿಎಂ ಸ್ಪಷ್ಟನೆ


ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿ ವೇಳೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಸಿದ್ಧ ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್‌ ಮತ್ತು ಕಾವೇರಿ ದಂಪತಿಯ ಮೊಮ್ಮಗನಾಗಿ, ಕೇಶವ ಭಟ್‌ ಮತ್ತು ಉಷಾ ದಂಪತಿ ಪುತ್ರನಾದ ಸನತ್‌ ಕೃಷ್ಣ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ವಿಭಾಗದಲ್ಲಿ ಬಿವಿಎಸ್‌ಸಿ ಮತ್ತು ಎಂವಿಎಸ್‌ಸಿ ವ್ಯಾಸಂಗ ಮಾಡಿದ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಿದರು.


ಪ್ರಸ್ತುತ ದೆಹಲಿಯ ರಾಷ್ಟ್ರೀಯ ವನ್ಯಜೀವಿ ಪಾರ್ಕ್‌ನಲ್ಲಿ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಇವರ ಪತ್ನಿ ಡಾ.ಪ್ರಿಯಾಂಕ ಜಸ್ತಾ ಪ್ರಸಕ್ತ ಡೆಹರಾಡೂನ್‌ನ ವನ್ಯಜೀವಿ ಸಂಶೋಧನಾ ವಿವಿಯಲ್ಲಿ ತಜ್ಞೆಯಾಗಿದ್ದಾರೆ. ಒಟ್ಟಿನಲ್ಲಿ ಚೀತಾಗಳನ್ನು ನಮೀಬಿಯಾದಿಂದ ದೇಶಕ್ಕೆ ಕರೆತರುವಲ್ಲಿಯವರೆಗೆ ಸನತ್‌ ಕೃಷ್ಣ ಪ್ರಮುಖ ಪಾತ್ರವಹಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.