ಬೆಂಗಳೂರು: ರಾಜ್ಯದೆಲ್ಲೆಡೆ ಕೊರೊನಾ ನಾಲ್ಕನೇ ಅಲೆ ಸದ್ದು ಮಾಡ್ತಿದೆ. ಶಾಲೆ ಆರಂಭಕ್ಕೂ ಮುನ್ನ ಗಂಡಾಂತರ ಶುರುವಾಗುತ್ತಾ ಅನ್ನೊ ಟೆನ್ಷನ್ ಪೋಷಕರನ್ನ ಕಾಡ್ತಿದೆ. ಆದ್ರೆ, ಸರ್ಕಾರ ನಿಗದಿಯಾದ ದಿನಾಂಕದಂದೇ ಶಾಲೆ ಆರಂಭಕ್ಕೆ ಮುಂದಾಗಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ಎಂದು ಸಂಕಲ್ಪ ಮಾಡಲಾಗಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ‌ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ. ಆದ್ರೆ, ಕೊರೊನಾ ನಾಲ್ಕನೇ ಅಲೆ ಭೀತಿಯ ಪೋಷಕರ ನಿದ್ರೆಗೆಡಿಸಿದೆ.


ಇದು ಸರ್ಕಾರದ ದೊಡ್ಡ ಹುನ್ನಾರ:
ಅವಧಿಗೆ ಮೊದಲೇ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್​ಡೌನ್ ಘೋಷಿಸುತ್ತಾರೆ. ಲಾಕ್​ಡೌನ್ ಹೇರಿಕೆ ಕಾರಣಕ್ಕೆ ಆನ್​ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- Vaccine for children: ವ್ಯಾಕ್ಸಿನೇಷನ್ ಬಗ್ಗೆ ದೊಡ್ಡ ನಿರ್ಧಾರ- ಈಗ 6-12 ವರ್ಷದ ಮಕ್ಕಳಿಗೂ ಲಸಿಕೆ


ಒಂದು ವೇಳೆ ಶಾಲೆ ಆರಂಭವಾದರೂ ನಾವು ಮಕ್ಕಳನ್ನು ಕಳಿಸುವುದಿಲ್ಲ ಎಂದು ಹಲವು ಪೋಷಕರು ಹೇಳಿದ್ದಾರೆ. ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ ಎಂದು ದೂರುತ್ತಿರುವ ಕೆಲ ಪೋಷಕರು, ಇನ್ನೂ 15 ದಿನ ಅಥವಾ 1 ತಿಂಗಳು ಕಾದು ನೋಡಿದ ಬಳಿಕ ಶಾಲೆ ತೆರೆಯಬೇಕಿತ್ತು. ಮೊದಲು ಶಾಲೆಯ ಆರಂಭಿಸುವ ದಿನಾಂಕ ಬದಲಿಸಬೇಕು. ಕೋವಿಡ್-19 ಸ್ಥಿತಿಗತಿ ನೋಡಿ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು. ಬ್ರಿಡ್ಜ್​ಕೋರ್ಸ್ ತರಗತಿಗಳನ್ನು ಆನ್​ಲೈನ್ ಮೂಲಕವೇ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.


ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಈ ಕ್ರಮ:
ಇನ್ನು, ಕಳೆದ ಮೂರು ವರ್ಷಗಳ ಚಟುವಟಿಕೆಗಳನ್ನು ಅವಲಕೋಕಿಸಿದ ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಬೇಗನೇ ಆರಂಭಿಸಿದರೆ ಕಲಿಸಲು ಹೆಚ್ಚು ಸಮಯ ಸಿಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ 3 ವರ್ಷಗಳಲ್ಲಿ ಶೇಕಡಾ 50-60ರಷ್ಟು ಮಾತ್ರ ಭೌತಿಕ ಕಲಿಕೆ ಆಗಿದೆ. 2019-20, 2020-21, 2021-22ನೇ ಸಾಲಿನಲ್ಲಿ ಕಲಿಕೆಗೆ ಧಕ್ಕೆಯಾಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆ ಆಗಿಲ್ಲ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ. ಕೊವಿಡ್ ಪಿಡುಗಿನ ಕಾರಣದಿಂದಾಗಿ ಭೌತಿಕ ತರಗತಿಗಳಿಗೆ ಬದಲಿಗೆ ಆನ್​ಲೈನ್ ಮೂಲಕ ಶಿಕ್ಷಣ ನೀಡಲಾಗಿತ್ತು. ಆದರೆ ಈ ಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಆಗಿರಲಿಲ್ಲ. ಈ ವರ್ಷದಿಂದಾದರೂ ಪರಿಣಾಮಕಾರಿ ಶಿಕ್ಷಣ ನೀಡಬೇಕು ಎಂದು ಶಿಕ್ಷಣ ಇಲಾಖೆ ಸಂಕಲ್ಪ ಮಾಡಿದೆ.ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾದ ಮಹಾರಾಷ್ಟ್ರ


ಮಕ್ಕಳು ಶಾಲೆಗಳಿಗೆ ಬರೋದ್ರಿಂದ ತೊಂದರೆ ಇಲ್ಲ:
ಇನ್ನು ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾಲ್ಕನೇ ಅಲೆ ಯಾವ ದೇಶದಲ್ಲೂ ಪರಿಣಾಮಕಾರಿಯಾಗಿ ಪ್ರಭಾವ ಬೀರಿಲ್ಲ. ಮಕ್ಕಳು ಶಾಲೆಗೆ ಬರುವುದರಿಂದ ಯಾವುದೇ ಸಮಸ್ಯೆ ಆಗೊಲ್ಲ. ಈಗಾಗ್ಲೇ ಕೊರೊನಾದಿಂದ ದಾಖಲಾತಿಯ ಪ್ರಮಾಣ ಕುಸಿದಿದೆ. ಸರ್ಕಾರ ಗೊಂದಲದ ಹೇಳಿಕೆಗಳನ್ನು ನೀಡೋದು ಸರಿಯಲ್ಲ. ಆನ್ ಲೈನ್ ಕ್ಲಾಸ್ ಎಲ್ಲ ಕಡೆ, ಎಲ್ಲ ಸಮಯದಲ್ಲೂ ಸೂಕ್ತವಾಗಿ ನಿರ್ವಹಿಸೋಕೆ‌ ಕಷ್ಟ ಅಂತಿದ್ದಾರೆ.


ಒಟ್ನಲ್ಲಿ ಶಾಲೆ ಆರಂಭಕ್ಕೆ ಕೊರೊನಾ ನಾಲ್ಕನೇ ಅಲೆ ಮೊದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಟಾಸ್ಕ್ ಫೋರ್ಸ್ ಹಾಗೂ ಆರೋಗ್ಯ ಇಲಾಖೆ ಸಲಹೆ ಪಡೆದು ಆರಂಭ ಮಾಡ್ತೀವಿ ಅಂತ ಹೇಳ್ತಿದೆ. ಒಂದು ವೇಳೆ ಕೊರೊನಾ ಕೇಸ್ ಹೆಚ್ಚಾದ್ರೆ ಶಾಲೆಗಳ ಬಾಗಿಲು ಮುಚ್ಚುತ್ತಾ ಅಂತ ಕಾದು ನೋಡ್ಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.