ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ‌ ಮಧ್ಯಂತರ ಚುನಾವಣೆ ಸಂಭವವಿಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್ 'ಕೆಲವರು ಮಧ್ಯಂತರ ಚುನಾವಣೆ ಸಂಬಂಧ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಹೊರತು ಪಕ್ಷದ ಅಭಿಪ್ರಾಯವಲ್ಲ.‌ ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಯೋಜನೆ ಹಾಕಿಕೊಂಡು ಅದರ ಅನುಷ್ಠಾನದತ್ತ ಸಾಗುತ್ತಿದ್ದೇವೆ.‌ ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡುತ್ತಿದ್ದೇವೆ ಎಂದರು.


ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮದ ಬಗೆಗಿನ ಟೀಕೆಯ ವಿಚಾರವಾಗಿ ಮಾತನಾಡಿದ ಅವರು ' ಗ್ರಾಮವಾಸ್ತವ್ಯ ಬಗ್ಗೆ ಬಿಜೆಪಿಯವರ ಟೀಕೆ ಸರಿಯಲ್ಲ. ಸರಕಾರವನ್ನು ಟೀಕೆ ಮಾಡುವವರು ನೇರವಾಗಿ ವಿಧಾನಸೌಧ ಅಥವಾ ಬಿಜೆಪಿ ಕಚೇರಿಯಲ್ಲಿ ಮಾಡಬಹುದಿತ್ತು.‌ ಆದರೂ ಪಾದಯಾತ್ರೆ ಮಾಡುವ ಮೂಲಕ ಟೀಕೆ ಮಾಡುವುದು ಏನಿತ್ತು. ಸರಕಾರವೇ ಜನರ ಬಳಿ ಹೋಗುವುದನ್ನು ಟೀಕೆ ಮಾಡಿದರೆ ಹೇಗೆ? ಗಾಂಧೀಜಿ ಕೂಡ ಗ್ರಾಮವಾಸ್ತವ್ಯ ಮಾಡಿದ್ದರು. ಅವರನ್ನು ಇವರು ಪ್ರಶ್ನೆ ಮಾಡುತ್ತಾರಾ?  ಎಂದು ಬಿಜೆಪಿ ನಡೆಗೆ ಕಿಡಿ ಕಾರಿದರು.


'ನಾನು ಚುನಾವಣೆ ಮುಂಚೆಯೂ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೆ.‌ ಈಗಲೂ ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಈ ಶನಿವಾರ ಬೆಂಗಳೂರಿನಲ್ಲೂ ಜನಸಂಪರ್ಕ ಸಭೆ ಮಾಡಲಿದ್ದೇನೆ.‌ಅಗತ್ಯ ಬಿದ್ದರೆ ರಾಜ್ಯಾದ್ಯಂತ ಮಾಡಲಾಗುವುದು ಎಂದು ಜಿ.ಪರಮೇಶ್ವರ ಹೇಳಿದರು.