ಬೆಂಗಳೂರು: ರಮೇಶ್ ಜಾರಕಿಹೋಳಿ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೋ ತಿಳಿದಿಲ್ಲ. ಅವರ ಮನವೊಲಿಕೆಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕೂಡ ಪ್ರಯತ್ನ ಪಟ್ಟಿದ್ದಾರೆ. ನಾನೂ ಕೂಡ ಅವರೊಂದಿಗೆ ಮಾತನಾಡಲಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಹಾಕಿದ ಬಳಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ನಮ್ಮ ಪಕ್ಷ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ಮೊದಲೇ ನೀಡಿತ್ತು. ಆದಾಗ್ಯೂ ಅವರು ರಾಜೀನಾಮೆ ಕೊಡುವ ಕಾರಣ ಸ್ಪಷ್ಟವಾಗಿಲ್ಲ. 
ಕೆಲ ಕಾರಣದಿಂದ ಸಚಿವ ಸ್ಥಾನ ಹಿಂಪಡೆಯಲಾಗಿತ್ತು. ಆದರೆ, ಮತ್ತೆ ಅವರಿಗೆ ರಾಜಕೀಯವಾಗಿ ಜವಾಬ್ದಾರಿಗಳನ್ನು ಪಕ್ಷ ಕೊಡುತ್ತದೆ. ಮಂತ್ರಿ ಸ್ಥಾನ ತೆಗೆದಿದ್ದೇ ರಾಜೀನಾಮೆಗೆ ಕಾರಣವಾದರೆ ನಮ್ಮ ಮುಖಂಡರು ಅವರೊಂದಿಗೆ ಮಾತನಾಡಲಿದ್ದಾರೆ ಎಂದರು.


ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗಲ್ಲ!
ಸರ್ಕಾರ ಬಿದ್ದು ಹೋಗತ್ತೆ ಎಂದು ಬಹಳಷ್ಟು ಜನ ಆಸೆ ಇಟ್ಟುಕೊಂಡಿದ್ದಾರೆ. ಮಂತ್ರಿ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಂಡಿದ್ದಾರೆ. ಆದರೆ, ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ ಎಂದು ಪರಮೇಶ್ವರ ಹೇಳಿದರು.


ಬಿಜೆಪಿಯಲ್ಲೂ ವೈಮಸ್ಸಿರುವ ಶಾಸಕರು ಸಾಕಷ್ಟಿದ್ದಾರೆ:
ಶಾಸಕರ ಅಸಮಾಧಾನದ ವಿಚಾರದಲ್ಲಿ ಸಾಕಷ್ಟು ಘಟನೆ ನಡೆದಿರಬಹುದು, ಬಿಜೆಪಿಯಲ್ಲೂ ವೈಮಸ್ಸಿರುವ ಶಾಸಕರು ಸಾಕಷ್ಟಿದ್ದಾರೆ. ಅವರು ಸಹ ರಾಜೀನಾಮೆ ನೀಡಬಹುದು ಎಂದು ನಾನು ಹೇಳಬಹುದಲ್ಲವೇ? ಹಾಗಾಗಿ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. 
ನಾವು ಬೀಳೋದು ಇಲ್ಲ, ನಿಮ್ಮ ಕೈಲಿ ಬೀಳಿಸೋಕು ಆಗಲ್ಲ ಎಂದು ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.


ನಮ್ಮ ಪಕ್ಷದಿಂದ ಬಿಜೆಪಿಗೆ ಶಾಸಕರು ಓಡಿ ಹೋಗುತ್ತಾರೆ ಎಂಬುದು ಸುಳ್ಳು. ಯಾರೂ ಹೋಗಲ್ಲ. ಅಸಮಾಧಾನ ಇರುವ ಶಾಸಕರ ಮನವೊಲಿಕೆ ಮಾಡಲಿದ್ದೇವೆ ಎಂದರು.