ರಾಜ್ಯದಲ್ಲಿ ಹೂಡಿಕೆ ಮಾಡಲು ಯು.ಎ.ಇ ಆಸಕ್ತಿ
ಕರ್ನಾಟಕದಲ್ಲಿ ಆಹಾರ ಭದ್ರತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಕಡಿಮೆ ವೆಚ್ಚದ ವಸತಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯು.ಎ.ಇ ಉತ್ಸುಕವಾಗಿದೆ- ಯು.ಎ.ಇ ರಾಯಭಾರಿ
ಬೆಂಗಳೂರು: ನವದೆಹಲಿಯಲ್ಲಿರುವ ಯು.ಎ.ಇ ರಾಯಭಾರಿ ಡಾ: ಅಹಮದ್ ಎ.ಆರ್.ಅಲ್ಬನ್ನಾ ಸೋಮವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದರು.
ಕರ್ನಾಟಕದಲ್ಲಿ ಆಹಾರ ಭದ್ರತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಕಡಿಮೆ ವೆಚ್ಚದ ವಸತಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯು.ಎ.ಇ ಉತ್ಸುಕವಾಗಿದೆ ಎಂದು ಡಾ. ಅಹಮದ್ ಎ.ಆರ್.ಅಲ್ಬನ್ನಾ ತಿಳಿಸಿದರು.
ಕಳೆದ ಹಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಕೃಷಿ, ನೀರಾವರಿ, ಆಟೋಮೊಬೈಲ್, ಡಿಜಿಟಲ್ ಮೆಡಿಸಿನ್ ಮುಂತಾದ ವಲಯಗಳಲ್ಲಿ ಯು.ಎ.ಇ ಮಾಡುತ್ತಿರುವ ಹೂಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ, ಆಹಾರ ಪಾರ್ಕ್ ಮತ್ತು ಕಡಿಮೆ ವೆಚ್ಚದ ಗೃಹ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಿಂದ ಉತ್ತಮ ಗುಣಮಟ್ಟದ ಹೂವು, ಹಣ್ಣು ಮತ್ತು ತರಕಾರಿ ಯೂರೋಪಿಯನ್ ದೇಶಗಳಿಗೆ ರಫ್ತಾಗುತ್ತಿದ್ದು, ಈ ವಲಯಗಳಲ್ಲಿಯೂ ಹೂಡಿಕೆಯನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.