ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ "ಸೂಪರ್‌ ಸ್ಪೆಷಾಲಿಟಿ ಟ್ರೋಮಾ ಸೆಂಟರ್" ತೆರೆದಿರುವುದು ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್‌ (Dr Sudhakar) ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ಪ್ರಧಾನಿ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (VIMS) ಬಳ್ಳಾರಿಯಲ್ಲಿ "ಸೂಪರ್ ಸ್ಪೆಷಾಲಿಟಿ ಟ್ರಾಮಾ ಘಟಕ"ವನ್ನು‌ ಸೋಮವಾರ ಮಾನ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್‌ ಅವರು ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ‌ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಕೂಡ ಪಾಲ್ಗೊಂಡಿದ್ದರು. 


ಈ ವೇಳೆ ಮಾತನಾಡಿದ ಸಚಿವ ಡಾ. ಸುಧಾಕರ್, ಉತ್ತರ ಕರ್ನಾಟಕ (Uttar Karnataka) ಭಾಗದಲ್ಲಿ ಅತ್ಯುನ್ನತ ಟ್ರೌಮಾ ಸೆಂಟರ್ ತೆರೆದಿರುವುದು ಅತ್ಯಂತ ಅವಶ್ಯವಾಗಿದೆ.  ಪ್ರತಿ ವರ್ಷ ರಾಜ್ಯದಲ್ಲಿ 4.7 ಲಕ್ಷ ಜನರು ರಸ್ತೆ ಅಪಘಾತಕ್ಕೆ ಒಳಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತ ನಡೆದ 1 ಗಂಟೆ ಗೋಲ್ಡನ್‌ ಹವರ್‌ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಚಿಕಿತ್ಸೆ ನೀಡಿದರೆ ಬದುಕಿಸಬಹುದು. ಇಂಥ ತುರ್ತು ಚಿಕಿತ್ಸೆಗಾಗಿ ದೂರದ  ಬೆಂಗಳೂರಿಗೆ ಬರುವ ಅಗತ್ಯವಿತ್ತು. ಈಗ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆ ಹಾಗೂ ರಾಜ್ಯದಲ್ಲಿ ತುರ್ತು ಚಿಕಿತ್ಸೆ ಟ್ರೋಮಾ ಕೇಂದ್ರದಲ್ಲಿ ಪಡೆಯಬಹುದು ಎಂದರು.


ನೂತನ ಟ್ರೌಮಾ ಸೆಂಟರ್‌ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೊಡುಗೆ ಅಪಾರ. ಒಟ್ಟು 200 ಬೆಡ್‌ ಸಾರ್ಮರ್ಥ್ಯದ ಟ್ರೋಮಾ ಸೆಂಟರ್‌ 72 ಐಸಿಯು ಬೆಡ್, 20 ವೆಂಟಿಲೇಟರ್ ಹಾಗೂ ಜನರಲ್ ವಾರ್ಡ್‌ ಗಳನ್ನು ಒಳಗೊಂಡಿದೆ.  ಹತ್ತಿರದ ನೆರೆ ರಾಜ್ಯದಲ್ಲಿ ಅಪಘಾತವಾದರೂ ಸಹ ಈ ಟ್ರೋಮಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.


ವೈದ್ಯಕೀಯ ಸೇವೆಯಲ್ಲಿ ಇತರೆ ರಾಜ್ಯಗಳಿಂತ‌ ಕರ್ನಾಟಕ ಮುಂಚೂಣಿಯಲ್ಲಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆಗಾಗಿ ಕಡಿಮೆ ಅವಧಿಯಲ್ಲಿ 20 ಸಾವಿರ ಐಸಿಯು ಬೆಡ್‌ಗಳ ನಿರ್ಮಾಣವನ್ನು ಮಾಡುವ ಮೂಲಕ ರಾಜ್ಯದ ಸಾಮರ್ಥ್ಯ ತೋರಿಸಿದ್ದೇವೆ ಎಂದರು.


2021ರೊಳಗೆ ನೂತನ ವೈದ್ಯಕೀಯ ಕಾಲೇಜು ಪ್ರಾರಂಭ:
ಕಾರ್ಯಕ್ರಮದ ನಡುವೆ ಕೇಂದ್ರ ಸಚಿವ ಹರ್ಷ ವರ್ಧನ್ ಅವರು ಕರ್ನಾಟಕದಲ್ಲಿ ಶೀಘ್ರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಹೇಳಿದರು. ಅದಕ್ಕೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರ ಸೇರಿದಂತೆ 4 ನೂತನ ವೈದ್ಯಕೀಯ ಕಾಲೇಜುಗಳು 2021ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ‌ ನೀಡಿದ್ದ ವೇಳೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾಗಿ ಉಲ್ಲೇಖಿಸಿದರು.


ಕಾರ್ಯಕ್ರಮದಲ್ಲಿ ವಿಮ್ಸ್‌ನ ನೂತನ ಸಿಟಿ ಸ್ಯಾನರ್‌‌ನನ್ನು ಸಚಿವರ ಡಾ. ಸುಧಾಕರ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಅಶ್ವಿನ್ ಕುಮಾರ್ ಚೌಬೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಪಾಲ್ಗೊಂಡಿದ್ದರು. 


ಟ್ರೋಮಾ ಸೆಂಟರ್‌ನ ವಿಶೇಷತೆ:
150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರೋಮಾ ಕೇಂದ್ರದಲ್ಲಿ ಒಟ್ಟು 200 ಬೆಡ್‌ ಒಳಗೊಂಡಿದೆ. 72 ಐಸಿಯು ಬೆಡ್, 20 ವೆಂಟಿಲೇಟರ್, ಸಿಟಿ ಸ್ಕ್ಯಾನ್, ಡಿಜಿಟಲ್‌ ಎಕ್ಸ್‌ ರೇ ಸೌಕರ್ಯ ಇರಲಿದೆ. ಜೊತೆಗೆ ಸೂಪರ್‌ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಗೂ ಟ್ರೋಮಾ, ನ್ಯೂರೋ ಸರ್ಜರಿ ಹಾಗೂ ಆರ್ಥೋಪೆಡಿಕ್‌ ಸೇವೆ ಸಹ ಒಳಗೊಂಡಿದೆ.