ಬಾಗಲಕೋಟೆ: 'ನಮಗೆ ಬೇಕಿರುವುದು ಮಹಿಷಾಸುರನಂತಹ ಮುಖ್ಯಮಂತ್ರಿ ಅಲ್ಲ, ದೇವರಂತಹ ಮುಖ್ಯಮಂತ್ರಿ' ಎಂದು ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯುರಪ್ಪ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ನಮಗೆ ಅವರಂತೆ ದೇವರಂಥ ಮುಖ್ಯಮಂತ್ರಿ ಬೇಕು. ಮಹಿಷಾಸುರನಂತಹ ಮುಖ್ಯಮಂತ್ರಿ ಅಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಅವರನ್ನು ಮಹಿಷಾಸುರನಿಗೆ ಹೋಲಿಸಿದರು. 


ಬಿ.ಎಸ್.ಯಡಿಯೂರಪ್ಪ ಅವರು ಜಾತಿ-ಧರ್ಮ, ಬಡವ-ಬಲ್ಲಿದ ಎನ್ನದೇ ಎಲ್ಲರಿಗೂ ಸಮಪಾಲು ಸಮಬಾಳು ಎನ್ನುವ ರೀತಿಯಲ್ಲಿ ಆಡಳಿತ ನಡೆಸಿದರು. ಈ ವಿಚಾರದಲ್ಲಿ ಯಡಿಯೂರಪ್ಪ ನಿಜವಾದ ದೇವರು. ಅಂಥ ದೇವರನ್ನು ಬಿಟ್ಟು ಸಿಎಂ ಸ್ಥಾನದಲ್ಲಿ ಬೇರೆ ಯಾರನ್ನೂ ನೋಡಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ದೇವರೇ ಬೇಕೆ ಹೊರತು ಮಹಿಷಾಸುರನಂಥವರಲ್ಲ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.