ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಬೃಹತ್ ಆರೋಗ್ಯ ಮೇಳದಲ್ಲಿ ನಿರೀಕ್ಷೆಗೂ ಮೀರಿ ಸುಮಾರು 1.50 ಲಕ್ಷಕ್ಕೂ ಹೆಚ್ಚು ಜನರು ನೊಂದಣಿಯಾಗಿ ಈ ಮೇಳ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗುವ ಮೂಲಕ ಜಾಗತಿಕ ದಾಖಲೆ ಬರೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಡಾ.ಕೆ.ಸುಧಾಕರ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಒಂದೇ ಸೂರಿನಡಿ ತಪಾಸಣೆ, ಚಿಕಿತ್ಸೆ ಮತ್ತು ಔಷಧಗಳ ವಿತರಣೆಯಾಗಲು ಆರೋಗ್ಯ ಮೇಳಗಳು ಪೂರಕವಾಗಿವೆ.ಮುಂದುವರೆದ ದೇಶಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿದ್ದು, ಅಭಿವೃದ್ಧಿಶೀಲ ರಾಷ್ಟ್ರ ಗಳಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಮತ್ತು ವ್ಯವಸ್ಥೆ ಅಧಿಕವಾಗಬೇಕಾಗಿದೆ.


ಇದನ್ನೂ ಓದಿ-World War: ಮಹಾಯುದ್ಧ ಆರಂಭದ ಸಂಕೇತವೇ ಇದು! ಉಕ್ರೇನ್-ರಷ್ಯಾ ಯುದ್ಧದಲ್ಲಿ ಯಾರು ಯಾರಿಗೆ ಸಾಥ್? ಇಲ್ಲದೆ ಡಿಟೇಲ್ಸ್


ಎರಡು ದಿನಗಳ ಬೃಹತ್ ಆರೋಗ್ಯ ಮೇಳದಲ್ಲಿ ಸುಮಾರು 1.50 ಲಕ್ಷ ಜನರು ಹೆಸರು ನೊಂದಾಯಿಸುವ ಮೂಲಕ ಜಾಗತಿಕ ಮಟ್ಟದ ದಾಖಲೆ ಬರೆಯಲಾಗಿದೆ.ಈ ಪೈಕಿ ಶೇ.70 ರಷ್ಟು ಜನರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿರುವುದೂ ದಾಖಲೆಗೆ ಮತ್ತೊಂದು ಕಾರಣವಾಗಿದೆ.ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈ ಮೇಳ ದಾಖಲಾಗಿ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.


ದೇಶದಲ್ಲಿ ಕೋವಿಡ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗಿದೆ. ಉಚಿತವಾಗಿ ಲಸಿಕೆ ನೀಡಲು ಕಡಿಮೆ ಜನಸಂಖ್ಯೆಯಿರುವ ಮುಂದುವರೆದ ಎಷ್ಟೋ ದೇಶಗಳಲ್ಲಿ ಸಾಧ್ಯವಾಗಿಲ್ಲ ಎಂಬುದರ ನಡುವೆಯೇ  ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಿರುವುದು ದೊಡ್ಡ ಮಟ್ಟದ ಸಾಧನೆ.ಈಗಾಗಲೇ ಮೊದಲ ಡೋಸ್ ಶೇ.100 ರಷ್ಟು ಮತ್ತು ಎರಡನೇ ಡೋಸ್ ಶೇ.98 ರಷ್ಟು ಹಾಗೂ ಬೂಸ್ಟರ್ ಡೋಸ್ ಶೇ.70 ರಷ್ಟು ಸಾಧನೆಯಾಗಿದೆ ಎಂದರು.


ದೇಶದ ಸಾರ್ವಜನಿಕರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ಮಹತ್ವದ ಯೋಜನೆ ಜಾರಿ ಮಾಡಿದೆ. ದೇಶದಲ್ಲಿ ಈವರೆಗೆ ಸುಮಾರು 80 ಕೋಟಿಗೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೊಂದಣಿಯ ವೇಗವನ್ನು ಹೆಚ್ಚಿಸಲಾಗಿದ್ದು, ಇನ್ನು 8 ತಿಂಗಳ ಒಳಗಾಗಿ ರಾಜ್ಯದ ಎಲ್ಲರನ್ನೂ ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು.ಆರು ತಿಂಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ನ ನೊಂದಣಿಯನ್ನು ಉಚಿತವಾಗಿ ಮಾಡಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದರು. 


ಇದನ್ನೂ ಓದಿ-Pfizer On COVID-19: 2024ರವರೆಗೆ ಬೆನ್ನು ಬಿಡಲ್ಲ ಕೊರೊನಾ, ಫೈಜರ್ ಕಂಪನಿಯ ಭವಿಷ್ಯವಾಣಿ


ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು, ಪೌರಾಡಳಿತ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಶಿಬಿರ ಮತ್ತು ಮೇಳಗಳು ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿವೆ. ಆರೋಗ್ಯ ಮೇಳಗಳು ಬಡವರು, ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ವರದಾನ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಆರೋಗ್ಯ ಶಿಬಿರ ಅಧಿಕಾರಿಗಳು, ಸ್ವಯಂಸೇವಕರು ಮತ್ತು ಜನಪ್ರತಿನಿಧಿಗಳ ಸಂಘಟಿತ ಪ್ರಯತ್ನದಿಂದಾಗಿ ಇಂದು ಜಿಲ್ಲೆಯ ಮನೆಮನೆಗೆ ತಲುಪುತ್ತಿದೆ.ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ವೈದ್ಯರು ಮತ್ತು ಶಿಕ್ಷಕರು ದೇವರಿಗೆ ಸಮಾನರಾಗಿದ್ದು, ವೈದ್ಯರು ನೀಡುವ ಆರೋಗ್ಯ ಭಾಗ್ಯ ಮತ್ತು ಶಿಕ್ಷಕರು ನೀಡುವ ಜ್ಞಾನದ ಭಾಗ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರತಿಯೊಬ್ಬರೂ ಧರ್ಮದ ಮೂಲಕ ಮುಕ್ತಿಯನ್ನು ಪಡೆಯಬಹುದು. ಆದರೆ, ಮುಕ್ತಿಗೆ ಸಾಧನವಾದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು.ದುಶ್ಚಟಗಳಿಗೆ ದಾಸರಾಗಿ ದೇಹವನ್ನು ಹಾಳು ಮಾಡಿಕೊಳ್ಳದಿರಲು ಸಂಕಲ್ಪ ಮಾಡಬೇಕು. ದೇಹದ ಆರೋಗ್ಯವನ್ನು ಹಾಳು ಮಾಡಿಕೊಂಡಲ್ಲಿ ಲೌಕಿಕ ಬದುಕು ಚೆನ್ನಾಗಿರುವುದಿಲ್ಲ. ಲೌಕಿಕ ಬದುಕು ಉತ್ತಮವಾಗಿಲ್ಲವೆಂದರೆ ಆಯುಷ್ಯವನ್ನು ಚೆಂದವಾಗಿ ಕಳೆಯಲು ಸಾಧ್ಯವಿಲ್ಲ.ಆದ್ದರಿಂದ ದೇಹದ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಎಷ್ಟೇ ಸಿರಿಸಂಪತ್ತಿದ್ದರೂ ಆರೋಗ್ಯ ಉತ್ತಮವಾಗಿಲ್ಲವೆಂದರೆ ಸಿರಿಸಂಪತ್ತು ಪ್ರಯೋಜನಕ್ಕೆ ಬರುವುದಿಲ್ಲ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂಬುದನ್ನು ಅರಿತು ಸ್ವಾಸ್ಥ್ಯ ಜೀವನಕ್ಕೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಆರೋಗ್ಯವಂತ ವ್ಯಕ್ತಿಗಳೇ ದೇಶದ ನಿಜವಾದ ಸಂಪತ್ತು. ಆದ್ದರಿಂದ ಕೆಟ್ಟಚಟಗಳಿಗೆ ಒಳಗಾಗಿ ಆರೋಗ್ಯ ಕೆಡಿಸಿಕೊಂಡು ಮನೆ ಮತ್ತು ದೇಶಕ್ಕೆ ಹೊರೆಯಾಗಬಾರದು ಎಂದು ಕಿವಿ ಮಾತು ಹೇಳಿದರು.


ಇದೇ ಸಂದರ್ಭದಲ್ಲಿ ಕಣ್ಣಿನ ಪರೀಕ್ಷೆ ನಡೆಸಿದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಉಚಿತ ಕನ್ನಡಕಗಳನ್ನು ಹಾಗೂ ಅಗತ್ಯವಿರುವವರಿಗೆ ಹಲ್ಲಿನ ಸೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.ಮೇಳದಲ್ಲಿ ಹೃದಯ,ಮೂಳೆ, ಕಣ್ಣು, ಶ್ವಾಸಕೋಶ,ಕಿವಿ,ಮೂಗು, ಗಂಟಲು ಸೇರಿದಂತೆ ಹಲವು ವಿಭಾಗಗಳಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಉಚಿತ ಔಷಧಗಳನ್ನು ನೀಡಲಾಯಿತು.


ಇದನ್ನೂ ಓದಿ : ಶಾಸಕ ಜಿ.ಟಿ.ದೇವೇಗೌಡರ 3 ವರ್ಷದ ಮೊಮ್ಮಗಳು ನಿಧನ


ಬೃಹತ್ ಜನಸಾಗರ 


ಎಸ್.ಜೆ.ಸಿಇಟಿ ಕಾಲೇಜು ಆವರಣದಲ್ಲಿ ಜನಸಾಗರದಂತೆ ಕಾಣುತ್ತಿತ್ತು.ಆವರಣದ ತುಂಬಾ ಜನವೋ ಜನ.ಎಲ್ಲಿ ನೋಡಿದರಲ್ಲಿ ಆರೋಗ್ಯ ಸೇವಾ ದಾಸೋಹ ಅವ್ಯಾಹತವಾಗಿ ನಡೆಯುತ್ತಿತ್ತು.


ರಾಜ್ಯದ 14 ಖಾಸಗಿ ವೈದ್ಯಕೀಯ ಕಾಲೇಜುಗಳು, 20 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು,12 ಕಣ್ಣಿನ ಚಿಕಿತ್ಸೆಯ ಸಂಚಾರಿ ವಾಹನಗಳು ಹಾಗೂ 15 ದಂತ ಚಿಕಿತ್ಸೆಯ ಸಂಚಾರಿ ವಾಹನಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ವಿವಿಧ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಮೇಳದಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾವು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎನ್.ಕೇಶವರೆಡ್ಡಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್,ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್,ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ.ಆರುಂಧತಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು  ಸಿಬ್ಬಂದಿ  ಹಾಗೂ ಹಾಜರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.