ಮೈಸೂರು : ಮೈಸೂರು ರಾಜಮನೆತನದ ಒಡೆಯರುಗಳ ಬಗ್ಗೆ ಜನರು ಇದುವರೆಗೂ ಅದೆಷ್ಟೇ ಓದಿದ್ದರೂ ಇದೀಗ ಆ ಮನೆತನದ ವಾರಸುದಾರನಿಂದಲೇ ಒಡೆಯರ್ ವಂಶದ 600 ವರ್ಷಗಳ ಇತಿಹಾಸವನ್ನು ತಿಳಿಯುವ ಸದಾವಕಾಶ ಒದಗಿಬಂದಿದೆ!


COMMERCIAL BREAK
SCROLL TO CONTINUE READING

ಹೌದು, ಯದುವಂಶದ 27ನೇ ಆಡಳಿತಗಾರರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ತಮ್ಮ ಪೂರ್ವಜರಿಂದ ಪಡೆದ ಒಡೆಯರ್ ವಂಶದ ಮಾಹಿತಿಯನ್ನು ಹಂಚಿಕೊಳ್ಳಲು 'ಭೇರುಂಡ' ಎಂಬ ಹೆಸರಿನಲ್ಲಿ ಡಿಜಿಟಲ್ ಸುದ್ದಿಪತ್ರವೊಂದನ್ನು ಪ್ರಾರಂಭಿಸಿದ್ದಾರೆ. 


ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜ ಯದುವೀರ್ ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಆರಂಭಿಕಾಗಿ ಇಂಗ್ಲಿಷ್ ಭಾಷೆಯಲ್ಲಿ ದ್ವಿಮಾಸಿಕ 
ಡಿಜಿಟಲ್ ಸುದ್ದಿಪತ್ರವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. 


ಈ ಸುದ್ದಿಪತ್ರ ದಸರಾ ಆವೃತ್ತಿಯಂತೆ ಯೋಜಿಸಿದ್ದರೂ, ಇದು ಅಂತಿಮವಾಗಿ ಇಂದು ಹೊರಬಂದಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮವಾದ ಸುದ್ದಿಗಳನ್ನು ನೀಡಲು ಬಯಸಿದ್ದೇನೆ ಎಂದು ನುಡಿದ ಯದುವೀರ್, ಇನ್ನೆರಡು ದಿನಗಳಲ್ಲಿ ಕನ್ನಡದಲ್ಲಿಯೂ ಸುದ್ದಿಪತ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರವೊಂದನ್ನು ಬರೆದಿರುವ ಅವರು, ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಸುದ್ದಿಪತ್ರದ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.