ಬೆಂಗಳೂರು: ವಿಧಾನಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ್ದ ವಿಶ್ವಾಸಮತ ನಿರ್ಣಯದಲ್ಲಿ ಆಡಳಿತ ಪಕ್ಷಕ್ಕೆ ಸೋಲುಂಟಾದ ಬೆನ್ನಲ್ಲೇ ವಿಜಯೋತ್ಸವ ಆಚರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಇದೀಗ ಪಕ್ಷದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಪತ್ರ ಬರೆಯುವ ಮೂಲಕ ಅಭಿನಂದನೆ ಕೋರಿದ್ದಾರೆ.


COMMERCIAL BREAK
SCROLL TO CONTINUE READING

"ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತದಲ್ಲಿ ನಾವು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಸೋಲಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದ್ದೇವೆ. 


ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ 105 ಶಾಸಕರೂ ಯಾವುದಕ್ಕೂ ಜಗ್ಗದೆ ದೃಢ ಮನಸ್ಕರಾಗಿದ್ದರು. ಹಲವು ರಾಜಕೀಯ ಕಾರಣಗಳಿಂದಾಗಿ ಕಳೆದ ಎರಡು ದಿನಗಳು ನಮಗೆ ಪರೀಕ್ಷೆಯ ಕಾಲವಾಗಿತ್ತು. ಆದರೆ, ಆ ಎಲ್ಲಾ ನಿರ್ಣಾಯಕ ಸಂದರ್ಭಗಳನ್ನೂ ಮೀರಿ ನಾವು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ್ದೇವೆ. 


ಇಲ್ಲಿಯವರೆಗೆ ಸಮ್ಮಿಶ್ರ ಸರ್ಕಾರದ ಕೆಟ್ಟ ಆಡಳಿತದಿಂದ ಬೇಸತ್ತಿದ್ದ ಜನತೆಗೆ ಮತ್ತು ನಮ್ಮ ಪಕ್ಷದ ಸದಸ್ಯರಿಗೆ ಮೈತ್ರಿ ಸರ್ಕಾರದ ಅಂತ್ಯದಿಂದಾಗಿ ನೆಮ್ಮದಿಯಾಗಿದೆ. ಈ ಸಂಭ್ರಮದ ಕ್ಷಣದಲ್ಲಿ ನಿಮಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಯಡಿಯೂರಪ್ಪ ಅವರು ಅಮಿತ್ ಷಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.