88ನೇ ಮಹಾಮಸ್ತಕಾಭಿಷೇಕದಲ್ಲಿ ಕಂಗೊಳಿಸಿದ ಬಾಹುಬಲಿ ಮೂರ್ತಿ

Sun, 18 Feb 2018-7:49 pm,

ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿರುವ ಐತಿಹಾಸಿಕ ಬಾಹುಬಲಿ ಮೂರ್ತಿಯ 88ನೇ ಮಹಾ ಮಸ್ತಕಾಭಿಷೇಕ ಫೆ.17 ರಿಂದ ಸಡಗರದಿಂದ ಆರಂಭಗೊಂಡಿತು. ಶನಿವಾರ ಮಧ್ಯಾಹ್ನ 2.32ರ ಶುಭ ಮುಹೂರ್ತದಲ್ಲಿ ಪ್ರಥಮದ ಕಳಶದ ಅಭಿಷೇಕವಾಯಿತು. 

ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ವರ್ಧಮಾನ್‌ ಸಾಗರ ಮಹಾರಾಜ್‌ ಅವರು ನೇತೃತ್ವದಲ್ಲಿ ಕಳಶಗಳ ಅಭಿಷೇಕ ಆರಂಭವಾಯಿತು. 12 ವರ್ಷಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನಾ ಮಠಗಳ ಜೈನ ಮುನಿಗಳು ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದರು.

ಮಹಾಮಜ್ಜನದ ಮೊದಲ ದಿನ 108 ಕಳಶಗಳ ಜಲಾಭಿಷೇಕವಾಯಿತು. ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟ ಮೂರ್ತಿ. 

ಹಾಲಿನ ಅಭಿಷೇಕದಲ್ಲಿ ಶ್ವೇತವಸ್ತ್ರಾಧರಿಯಂತೆ ಕಂಡ ಗೊಮ್ಮಟೇಶ್ವರ. 

ಅಕ್ಕಿ ಹಿಟ್ಟಿನ ಅಭಿಷೇಕದಲ್ಲಿ ಬಾಹುಬಲಿ ಕಂಡಿದ್ದು ಹೀಗೆ.

ಅರಿಶಿಣ ಅಭಿಷೇಕದ ವೇಳೆ ಚಿನ್ನದ ಮೂರ್ತಿಯಂತೆ ಕಂಗೊಳಿಸಿದ ಬಾಹುಬಲಿ. 

ಶ್ರೀಗಂಧ, ರಕ್ತ ಚಂದನ ಅರೆದು ನೀರಿಗೆ ಬೆರೆಸಿ ಮಾಡಿದ ಅಭಿಷೇಕದಲ್ಲಿ ತಾಮ್ರದ ಬಣ್ಣದಲ್ಲಿ ಮಿನುಗಿದ ಬಾಹುಬಲಿ. ಗಿಡ ಮೂಲಿಕ ಕಶಾಯದ ಅಭಿಷೇಕ, ತದನಂತರ ಬಿಳಿಗಂಧ, ಚಂದನ, ಅಷ್ಟಗಂಧ, ಕೇಸರಿ ದಳಗಳ ಅಭಿಷೇಕವಾಯಿತು. ಬೆಳ್ಳಿ ಹೂವುಗಳು, ಚಿನ್ನದ ಹೂವುಗಳು, ನವರತ್ನಗಳ ಅಭಿಷೇಕದ ನಂತರ ವಿವಿಧ ರಾಜ್ಯಗಳಿಂದ ಪುಷ್ಪಸ್ನಾನದ ಮೂಲಕ ಮಂಗಳಾರತಿಯೊಂದಿಗೆ ದಿನದ ಮಸ್ತಕಾಭಿಷೇಕ ಮುಗಿಯಿತು. 

ಒಂದೊಂದು ಅಭಿಷೇಕದ ನಂತರ ಮೂರ್ತಿಗೆ ಒಂದೊಂದು ಬಣ್ಣ ಬರುತ್ತಿದ ಹಾಗೆಯೇ ರಾಜಾಂಗಣದಲ್ಲಿ ಸೇರಿದ್ದ ಭಕ್ತರು ಬಾಹುಬಲಿ ಮೇಲಿಂದ ಬಿದ್ದ ನೀರಿನೊಂದಿಗೆ ಮೈ ತುಂಬ ಅರಿಷಿಣ, ಚಂದನ, ಶ್ರೀಗಂಧದದಿಂದ ಮಿಂದೆದ್ದರು. 

ಮಹೋತ್ಸವದಲ್ಲಿ ಭಾಗವಹಿಸಲು ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಮಹಾಮಜ್ಜನ ವೀಕ್ಷಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link