ಕಾಟ್ಮಂಡು: ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ (ಕೆ.ಪಿ. ಒಲಿ ಶರ್ಮಾ) ಒಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತವದ ಮೇಲೆ ಸಾಂಸ್ಕೃತಿಕ ಅತಿಕ್ರಮಣ ಆರೋಪ ಮಾಡಿದ್ದಾರೆ. ಪ್ರಧಾನಿ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಓಲಿ, ಭಾರತವು 'ನಕಲಿ ಅಯೋಧ್ಯೆಯನ್ನು' ಸೃಷ್ಟಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳನ್ನು ಅತಿಕ್ರಮಿಸಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಶ್ರೀರಾಮಚಂದ್ರನ ಅಯೋಧ್ಯಾ ನಗರಿ ಭಾರತದ ಉತ್ತರ ಪ್ರದೆಶದಲ್ಲಿಲ್ಲ ಮತ್ತು ಅದು ನೇಪಾಳದ ವಾಲ್ಮೀಕಿ ಆಶ್ರಮದ ಬಳಿ ಇದೆ ಎಂದಿದ್ದಾರೆ. ವಾಲ್ಮೀಕಿ ರಾಮಾಯಣದ ನೇಪಾಳಿ ಅನುವಾದವನ್ನು ರಚಿಸಿರುವ ನೇಪಾಳದ ಆದಿಕವಿ ಭಾನುಭಕ್ತ ಅವರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಓಲಿ, ನಾವು ಇದುವರೆಗೂ ಸೀತಾ ಮಾತೆಯನ್ನು ವರಿಸಿದ ಶ್ರೀರಾಮಚಂದ್ರ ಭಾರತೀಯನಾಗಿದ್ದಾನೆ ಎಂಬ ಭ್ರಮೆಯಲ್ಲಿದ್ದೇವು. ಆದರೆ, ಆತ ಭಾರತೀಯನಾಗಿರದೆ, ನೇಪಾಳಿಯಾಗಿದ್ದಾನೆ ಎಂದು ಹೇಳಿ ಓಲಿ ವಿವಾದ ಹುಟ್ಟುಹಾಕಿದ್ದಾರೆ.


ಜನಕಪುರ್ ನಿಂದ ಪಶ್ಚಿಮಕ್ಕೆ ಇರುವ ಬೀರಗಂಜ್ ಬಳಿ ಠೋರಿ ಬಳಿ ವಾಲ್ಮೀಕಿ ಆಶ್ರಮವಿದ್ದು, ಅದರ ಬಳಿಯೇ ಅಯೋಧ್ಯಾ ನಗರಿ ಇದೆ ಮತ್ತು ರಾಮ ಅಲ್ಲಿಯ ರಾಜಕುಮಾರನಾಗಿದ್ದ. ವಾಲ್ಮೀಕಿ ನಗರ ಹೆಸರಿನ ಸ್ಥಳ ಸದ್ಯ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿದ್ದು, ಅದರ ಸ್ವಲ್ಪ ಭಾಗ ನೇಪಾಳದಲ್ಲಿಯೂ ಕೂಡ ಇದೆ ಎಂದು ಓಲಿ ಹೇಳಿದ್ದಾರೆ.


ಭಾರತ ಹೇಳಿಕೊಳ್ಳುವ ಸ್ಥಾನದಲ್ಲಿ ರಾಜನನ್ನು ಮದುವೆಯಾಗಲು ಅಯೋಧ್ಯೆಯ ಜನರು ಜನಕ್‌ಪುರಕ್ಕೆ ಹೇಗೆ ಬಂದರು? ಎಂದು ಓಲಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಆ ಸಮಯದಲ್ಲಿ ಯಾವುದೇ ದೂರವಾಣಿ ಅಥವಾ ಮೊಬೈಲ್ ಫೋನ್ ಇರಲಿಲ್ಲ. ಹೀಗಾಗಿ ಅಂದಿನ ಕಾಲದಲ್ಲಿ ಇದು ತಿಳಿಯುವುದು ಅಸಾಧ್ಯವಾಗಿತ್ತು? ಪ್ರಾಚೀನ ಕಾಲದಲ್ಲಿ ವಿವಾಹಗಳು ಹತ್ತಿರದಲ್ಲಿಯೇ ನೆರವೇರುತ್ತಿದ್ದವು. ಹೀಗಾಗಿ ಭಾರತ ಹೇಳಿಕೊಳ್ಳುವ ಮತ್ತು ಅಷ್ಟೊಂದು ದೂರದಲ್ಲಿರುವ ಅಯೋಧ್ಯೆಯಿಂದ ಮದುವೆಯಾಗಲು ಯಾರು ಬರುತ್ತಾರೆ? ಹತ್ತಿರದಲ್ಲೇ ಹುಡುಕಿಕೊಂಡು ಮದುವೆಯಾಗುತ್ತಿದ್ದರು ಎಂದು ಓಲಿ ತಮ್ಮ ವಾದ ಮಂಡಿಸಿದ್ದಾರೆ.