ನವದೆಹಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370ನ್ನು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಸಂಸತೀನ ಉಭಯ ಸದನಗಳ ಸಭೆ ಕರೆದಿತ್ತು. ಆದರೆ ಆ ತುರ್ತು ಸಭೆಗೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೇ ಗೈರಾಗಿದ್ದು ಸದನದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಸದನವನ್ನು ಶಾಂತಗೊಳಿಸಲು ಸ್ಪೀಕರ್ ಹರಸಾಹಸ ಪಟ್ಟರೂ ಕೂಡ ಸಂಸದರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಕೊನೆಗೆ ಸದನದಲ್ಲಿನ ಗದ್ದಲ, ಕೋಲಾಹಲ ನಿಲ್ಲದ ಕಾರಣ ಸ್ಪೀಕರ್ ಸದನವನ್ನು ಮುಂದೂಡಿ ತಮ್ಮ ಕೋಣೆಗೆ ತೆರಳಿದರು.



ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತದ ನಿರ್ಧಾರವನ್ನು ಚರ್ಚಿಸಲು ಪಾಕಿಸ್ತಾನದ ರಾಷ್ಟ್ರಪತಿ ಡಾ.ಆರಿಫ್ ಅಲ್ವಿ ಅವರು ಇಂದು (ಮಂಗಳವಾರ) ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆದಿದ್ದರು. ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್ ಜಂಟಿ ಸಭೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯವು ಸೋಮವಾರ ಕಾರ್ಯಸೂಚಿಯನ್ನು ಹೊರಡಿಸಿತ್ತು. 


ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜ್ವಾ ನಿದ್ದೆಗೆಡಿಸಿದ ಭಾರತದ ನಿರ್ಧಾರ:
ಮತ್ತೊಂದೆಡೆ, ಕಾಶ್ಮೀರ ವಿಚಾರದಲ್ಲಿ ಭಾರತದ ಈ ದಿಟ್ಟ ಹೆಜ್ಜೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜ್ವಾ ಅವರ ನಿದ್ದೆ ಕೆಡಿಸಿದ್ದು, ಅವರು ಪಿಒಕೆ(ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸಿದ್ದಾರೆ. ಸೋಮವಾರ, ಭಾರತವು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ತಕ್ಷಣ, ಸೇನಾ ಮುಖ್ಯಸ್ಥರು ಕಮಾಂಡರ್‌ಗಳಿಗೆ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಭೆ ಕರೆದರು. ಅವರು ಮಂಗಳವಾರ ಕಾರ್ಪ್ಸ್ ಕಮಾಂಡರ್ಗಳೊಂದಿಗೆ ಸುದೀರ್ಘ ಸಭೆ ನಡೆಸಿದರು. ಜಿಯೋ ನ್ಯೂಸ್ ಪ್ರಕಾರ, ಕಾರ್ಪ್ಸ್ ಕಮಾಂಡರ್ಸ್ ಸಭೆಯ ಕಾರ್ಯಸೂಚಿಯು ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ನಡೆ ಮತ್ತು ನಿಯಂತ್ರಣ ರೇಖೆಯಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಕಾಶ್ಮೀರದಲ್ಲಿ ಅದರ ಪ್ರಭಾವವನ್ನು ವಿಶ್ಲೇಷಿಸುವುದಾಗಿದೆ.