ದಸರಾ ವಿಶೇಷ: ಇಂದು ಆಯುಧ ಪೂಜೆ ಸಂಭ್ರಮ

ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದು 'ಆಯುಧಪೂಜೆ' ಎಂದೇ ಖ್ಯಾತಿ ಪಡೆದಿದೆ.  

Last Updated : Oct 18, 2018, 08:13 AM IST
ದಸರಾ ವಿಶೇಷ: ಇಂದು ಆಯುಧ ಪೂಜೆ ಸಂಭ್ರಮ title=

ಮೈಸೂರು: ನವರಾತ್ರಿ ಆಚರಣೆಯ ಹಿಂದೆ ನಾವು ಅನೇಕ ಪೌರಾಣಿಕ ಕಥೆಗಳನ್ನು ಕಾಣಬಹುದು. ಕೆಲವೆಡೆ ಶಕ್ತಿದೇವತೆಯಾದ ಚಾಮುಂಡೇಶ್ವರಿಯು 9 ದಿನಗಳು ದೇವಾನುದೇವತೆಗಳ ಶಕ್ತಿ ಪಡೆದು ಮಹಿಷಾಸುರನನ್ನು ಕೊಂದಿದ್ದರ ಪ್ರತೀಕವಾಗಿ ನವರಾತ್ರಿ ಆಚರಿಸುತ್ತಾರೆ.

ಮತ್ತೊಂದು ಉಲ್ಲೇಖವೆಂದರೆ - ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸ ಮುಗಿಸಿ ಅದರಲ್ಲೂ ಬೃಹನ್ನಳೆ ವಿಷದಲ್ಲಿದ್ದ ಅರ್ಜುನ ತನ್ನ ಆಯುಧ ಇಟ್ಟಿದ್ದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧ ಪಡೆದ ದಿನದ ಪ್ರತೀಕವಾಗಿ ನವರಾತ್ರಿಯಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ದತಿಯೂ ಇದೆ.

ಇಂದು ಬೆಳಿಗ್ಗೆ ಚಂಡಿಹೋಮ ನೆರವೇರಿತು, ನಂತರದ ಶುಭ ಘಳಿಗೆಯಲ್ಲಿ ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ವಿವಿಧ ಆಯುಧಗಳನ್ನು ಕೋಡಿಸೋಮೇಶ್ವರ ದೇವಾಲಯಕ್ಕೆ ರವಾನಿಸಲಾಗುವುದು. ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದ ಬಳಿಕ ಅರಮನೆಯ ಕಲ್ಯಾಣಮಂಟಪದಲ್ಲಿ ಯದುವೀರ್ ಒಡೆಯರ್ ರಿಂದ ಆಯುಧಪೂಜೆ ನೆರವೇರಲಿದೆ. ಇಂದು ಸಂಜೆ ಖಾಸಗಿ ದರ್ಬಾರ್ ಮುಕ್ತಾಯವಾಗಲಿದ್ದು, ಚಿನ್ನದ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹದ ಮೂರ್ತಿಯನ್ನು ಬೇರ್ಪಡಿಸಲಾಗುವುದು.

ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದನ್ನು 'ಆಯುಧಪೂಜೆ' ಎಂದು ಕರೆಯಲಾಗುವುದು. ಮೈಸೂರು ಅರಮನೆಯಲ್ಲಿ ಎಲ್ಲಾ ಯುದ್ಧೋಪಕರಣಗಳಿಗೆ ಪೂಜೆ ಸಲ್ಲಿಸಿದರೆ, ಮನೆಗಳಲ್ಲಿ ವಾಹನಗಳಿಗೆ ಮತ್ತು ಮನೆಯಲ್ಲಿರುವ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. 
 

Trending News