ನವದೆಹಲಿ: ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ "ಪ್ರಧಾನಿ ಮೋದಿ ಸುಳ್ಳು ಹೇಳಬಾರದು. 56 ಇಂಚಿನ ಎದೆ ಎಂದು ಹೇಳುವ ಅವರು ಬರಿ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
ಬುಧುವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ"ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ತಮ್ಮ ಆಡಳಿತ ಅವಧಿಯಲ್ಲಿ ರೈತರ ಆದಾಯ ಮೂರು ಪಟ್ಟು ಅಧಿಕಗೊಂಡಿದೆ.ಕನ್ಯಾಶ್ರೀ ಹಾಗೂ ಯುವಶ್ರೀಯಂತಹ ಯೋಜನೆಗಳನ್ನು ಯುವ ಜನರಿಗಾಗಿ ಜಾರಿಗೆ ತರಲಾಗಿದೆ ಎಂದು ಮಮತಾ ಬ್ಯಾನರ್ಜೀ ಹೇಳಿದರು.
100 ದಿನಗಳ ಕನಿಷ್ಠ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿರುವುದರಲ್ಲಿ ಪಶ್ಚಿಮ ಬಂಗಾಳ ಎಲ್ಲ ರಾಜ್ಯಗಳಿಗಿಂತಲೂ ಮುಂದಿದೆ.ಅದಕ್ಕಾಗಿ ಭಾರತ ಸರ್ಕಾರವು ಪ್ರಶಸ್ತಿಯನ್ನು ಸಹ ನೀಡಿದೆ. "ಇದನ್ನು ನಾನು ಹೇಳುತ್ತಿಲ್ಲ. ಆದರೆ ನಿಮ್ಮ ಸರ್ಕಾರವೇ ಈ ಸಾಧನೆಗೆ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಿದರು. ಇದೇ ವೇಳೆ 2014 ರಲ್ಲಿ 15 ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿದ್ದ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜೀ ವಾಗ್ದಾಳಿ ನಡೆಸಿದರು.