ಉಗ್ರರ ಬಗ್ಗೆ ಕಾಂಗ್ರೆಸ್‌ನ ಸಹಾನುಭೂತಿ ಮನೋಭಾವ ಆತಂಕಕಾರಿ : ಅಶೋಕ್‌ ಆಕ್ರೋಶ

R Ashok: ಸಮಾಜಘಾತುಕ ಶಕ್ತಿಗಳು ಹಾಗೂ ಉಗ್ರಗಾಮಿ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ರಾಜ್ಯದ ಕಾಂಗ್ರೆಸ್‌ ಸರಕಾರ ಸಹಾನುಭೂತಿ ಮನೋಭಾವ ಪ್ರದರ್ಶಿಸುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Written by - Savita M B | Last Updated : Mar 3, 2024, 03:22 PM IST
  • ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶದ್ರೋಹ ಕೆಲಸ ಮಾಡುತ್ತಿರುವ ರಾಜ್ಯ ಸರಕಾರ
  • ಜನವಿರೋಧಿ ಧೋರಣೆಯ ಈ ಸರಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ
ಉಗ್ರರ ಬಗ್ಗೆ ಕಾಂಗ್ರೆಸ್‌ನ ಸಹಾನುಭೂತಿ ಮನೋಭಾವ ಆತಂಕಕಾರಿ : ಅಶೋಕ್‌ ಆಕ್ರೋಶ  title=

ಬೆಂಗಳೂರು: ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶದ್ರೋಹ ಕೆಲಸ ಮಾಡುತ್ತಿರುವ ರಾಜ್ಯ ಸರಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಜನವಿರೋಧಿ ಧೋರಣೆಯ ಈ ಸರಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೆ ಪೂರ್ವಭಾವಿಯಾಗಿ ಜನತೆಯಿಂದ ಅಭಿಪ್ರಾಯ ಸಂಗ್ರಹಿಸುವ “ಸಂಕಲ್ಪ ಅಭಿಯಾನ” ಕಾರ್ಯಕ್ರಮಕ್ಕೆ ಪಕ್ಷದ ಕಚೇರಿಯಲ್ಲಿ ಭಾನುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ-ಉದ್ಯೋಗಾಕಾಂಕ್ಷಿಗಳಿಗೆ Good News: KPSCಯಿಂದ 264 ಭೂಮಾಪಕರ ನೇಮಕಾತಿಗೆ ಅಧಿಸೂಚನೆ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಕಳವಳಕಾರಿಯಾಗಿದೆ. ದೇಶ ವಿದ್ರೋಹಿ ಶಕ್ತಿಗಳನ್ನೇ ಸಮರ್ಥನೆ ಮಾಡುವ, ದುಷ್ಕೃತ್ಯಗಳನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸಲಾಗಿದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ನಿರತವಾಗಿರುವ ಕಾಂಗ್ರೆಸ್‌ ಸರಕಾರ ಇಂತಹ ಕೃತ್ಯಗಳಲ್ಲೂ ಕೀಳು ಮನೋಭಾವ ಪ್ರದರ್ಶಿಸುತ್ತಿರುವುದು ರಾಜ್ಯದ ಜನತೆಯಲ್ಲಿ ಆಘಾತವುಂಟು ಮಾಡಿದೆ ಎಂದು ಕಿಡಿಕಾರಿದರು.

ಎಫ್‌ಎಸ್‌ಎಲ್ ವರದಿ ಬಹಿರಂಗಪಡಿಸಿ 
ಫೆ. 27ರಂದು ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಅಸ್ಮಿತೆಯಂತಿರುವ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲಾಯಿತು. ಇದುವರೆಗೂ ಒಬ್ಬನನ್ನು ಬಂಧಿಸಿಲ್ಲ. 25 ಮಂದಿ ಪ್ರವೇಶಕ್ಕೆ ಅನುಮತಿ ಪಡೆದಿದ್ದರೂ ನೂರಕ್ಕೂ ಹೆಚ್ಚು ಮಂದಿ ಒಳ ಪ್ರವೇಶಿಸಿದ್ದರು. ಇದಕ್ಕೆ ಅವಕಾಶ ನೀಡಿದ್ದು ಯಾರು? ಪೊಲೀಸರು ಇವರಿಗೆ ಅವಕಾಶ ಮಾಡಿಕೊಟ್ಟಿದ್ದು ಹೇಗೆ? ಸ್ಥಳದಲ್ಲಿ ಹಿರಿಯ ಅಧಿಕಾರಿ ಆದಿಯಾಗಿ ಇದ್ದ ಅನೇಕ ಪೊಲೀಸರು ಪಾಕ್‌ ಪರ ಘೋಷಣೆ ಕೂಗಿದಾಗ ಮೌನವಾಗಿದ್ದು ಅವರಿಗೆ ಹೊರ ಹೋಗಲು ಅವಕಾಶ ನೀಡಿದ್ದು ಯಾಕೆ? ವಿಧಾನಸೌಧದಲ್ಲಿರುವ ಸಿಸಿಟಿವಿ ಮತ್ತು ಮಾಧ್ಯಮಗಳ ಬಳಿ ಇಡೀ ಘಟನೆಯ ವಿಡಿಯೋ ಚಿತ್ರೀಕರಣ ಇದ್ದರೂ ಆರೋಪಿಗಳನ್ನು ಆರು ದಿನ ಆದರೂ ಬಂಧಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.

ಈಗಾಗಲೇ ಎಫ್‌ಎಸ್‌ಎಲ್‌ ನವರು ಪೊಲೀಸರು ನೀಡಿದ್ದ ವಿಡಿಯೋ ಚಿತ್ರೀಕರಣದಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ಸತ್ಯ ಎಂದು ವರದಿ ನೀಡಿದ್ದಾರೆ. ಇದನ್ನು  ಕೆಲ ಅಧಿಕಾರಿಗಳು ನನಗೂ ಹೇಳಿದ್ದಾರೆ ಮತ್ತು ಮಾಧ್ಯಮಗಳು ಅದನ್ನು ವರದಿ ಮಾಡಿವೆ. ಆದರೂ ಇನ್ನೂ ವರದಿ ಕೈ ಸೇರಿಲ್ಲ ಎಂದು ಸತ್ಯವನ್ನು ಮರೆ ಮಾಚುವ ಕೆಲಸ ಮಾಡಲಾಗುತ್ತಿದೆ. ಇದುವರೆಗೆ ಕೇವಲ ಏಳು ಮಂದಿಯನ್ನು ಕರೆದು ವಿಚಾರಣೆ ನಡೆಸುವ ಶಾಸ್ತ್ರ ಮಾಡಿ ತಿಪ್ಪೇ ಸಾರಿಸಲಾಗಿದೆ. ಎಫ್‌ಎಸ್‌ಎಲ್‌ ವರದಿ ಬಿಡುಗಡೆಗೆ ಅಡ್ಡಿ ಮಾಡುತ್ತಿರುವ ಶಕ್ತಿ ಯಾವುದು ಎಂದು ಅವರು ತರಾಟೆ ತೆಗೆದುಕೊಂಡರು.

ಅನುಮಾನಾಸ್ಪದ ನಡೆ 
ಈ ಘಟನೆಯ ಪ್ರತಿ ಹಂತದಲ್ಲೂ ಸರಕಾರದ ನಡೆ ಅನುಮಾನಾಸ್ಪದವಾಗಿದೆ.  ಎಫ್‌ಐಆರ್‌ನಲ್ಲೂ ಐಪಿಸಿ 505 ಮತ್ತು 153 ಸೆಕ್ಷನ್‌ಗಳನ್ನು ಹಾಕಲಾಗಿದೆ. ವಾಸ್ತವವಾಗಿ ಐಪಿಸಿ ಕಲಂ 124 ಎ ಅನ್ವಯ ದೇಶದ್ರೋಹದಡಿ ಪ್ರಕರಣ ದಾಖಲಿಸಬೇಕಾಗಿತ್ತು. ಆ ಕೆಲಸ ಮಾಡದೆ ತಪ್ಪಿತಸ್ಥರು ಸುಲಭವಾಗಿ ಪಾರಾಗುವ ಮಾರ್ಗವನ್ನು ಸರಕಾರವೇ ತೋರಿಸಿಕೊಟ್ಟಿದೆ ಎಂದು ಕಿಡಿ ಕಾರಿದರು.  

ಈ ಘಟನೆಗೆ ಸಂಬಂಧಿಸಿದಂತೆ ಸಿಎಂ ಆದಿಯಾಗಿ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇವರ ನಡುವೆಯೇ ಸಮನ್ವಯ ಇಲ್ಲ.  ಇದು ಮಾಧ್ಯಮಗಳ ಸೃಷ್ಟಿ ಎಂದು ಪ್ರಿಯಾಂಕ ಖರ್ಗೆ ಹೇಳಿದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಆ ರೀತಿ ಘೋಷಣೆಯನ್ನೇ ಕೂಗಿಲ್ಲ ಎಂದು ತನಿಖೆಗೆ ಮೊದಲೇ ತೀರ್ಪು ನೀಡಿದ್ದಾರೆ. ಇವರು ವರದಿ ಬಹಿರಂಗಪಡಿಸಲು ತಡೆಯುತ್ತಿರುವ ಶಕ್ತಿಗಳು ಯಾವುದು? ಇನ್ನೇಷ್ಟು ದಿನ ಈ ರೀತಿ ಮುಚ್ಚಿಟ್ಟು ನಾಟಕ ಆಡುತ್ತಾರೆ. ಚುನಾವಣೆ ಆಗುವ ತನಕ ನಾವು ಬಿಡುಗಡೆ ಮಾಡುವುದಿಲ್ಲ ಎಂದಾದರೂ ಹೇಳಿ ಬಿಡಲಿ. ಈ ಸರಕಾರದ ಪ್ರತಿಯೊಂದು ನಡೆಗಳು ಅನುಮಾನಾಸ್ಪದವಾಗಿವೆ ಎಂದರು.

ಇನ್ನೆಂಥಾ ಸಾಕ್ಷ್ಯ ಬೇಕು ? 
ರಾಮೇಶ್ವರಂ ಕೆಫೆ ಕೃತ್ಯವು ಮಂಗಳೂರಿನ ಕುಕ್ಕರ್‌ಬಾಂಬ್‌ ಕೃತ್ಯಕ್ಕೆ ಸಾಮ್ಯತೆ ಹೊಂದಿದೆ. ಇದು ಭಯೋತ್ಪಾದಕರ ಕೃತ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಎನ್ ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸಿಲೆಂಡರ್‌ ಅಥವಾ ಇನ್ಯಾವುದೇ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂಬುದನ್ನು ನೋಡಬೇಕಿದೆ ಅನ್ನುತ್ತಾರೆ. ಗೃಹ ಸಚಿವರು ಬ್ಯುಸಿನೆಸ್‌ ರೈವಲರಿ ಕೂಡ ಇರಬಹುದು ಅನ್ನುತ್ತಾರೆ. ಇದು ಭಯೋತ್ಪಾದನೆ ಕೃತ್ಯ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಂತಿಲ್ಲ. ಎನ್‌ಐಎ, ಪೊಲೀಸ್‌ ಮತ್ತು ತಜ್ಞರ ಅಭಿಪ್ರಾಯಕ್ಕೆ ತದ್ವಿರುದ್ಧ ಅಭಿಪ್ರಾಯ ನೀಡುತ್ತಿರುವ ಹಿಂದಿನ ಕಾರಣ ರಾಜಕಾರಣವೇ ಹೊರತು ಇನ್ನೇನು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ-ಉದ್ಯೋಗಾಕಾಂಕ್ಷಿಗಳಿಗೆ Good News: KPSCಯಿಂದ 264 ಭೂಮಾಪಕರ ನೇಮಕಾತಿಗೆ ಅಧಿಸೂಚನೆ

ರಾಜ್ಯದಲ್ಲಿ ಅಲ್ಪಸಂಖ್ಯಾತರ ಮನಸ್ಸನ್ನು ಕಲ್ಮಶಗೊಳಿಸಲಾಗಿದೆ. ನೀವು ಏನೇ ಮಾಡಿದರೂ ರಕ್ಷಿಸುತ್ತೇವೆ, ನಿಮ್ಮ ಜತೆ ನಾವಿದ್ದೇವೆ. ಬಹು ಸಂಖ್ಯಾತರನ್ನು ಬಗ್ಗುಬಡಿಯುತ್ತೇವೆ ಎಂಬ ಕಾಂಗ್ರೆಸ್‌ ಮನಸ್ಥಿತಿಯನ್ನು ಅಲ್ಪಸಂಖ್ಯಾತರಲ್ಲಿ ತುಂಬಿಸಲಾಗಿದೆ. ಈ ಕಾರಣದಿಂದಲೇ ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಗಳು ನಡೆದವು. ಮೈಸೂರಿನಲ್ಲಿ ಕೆಎಫ್‌ಡಿ ಕಾರ್ಯಕರ್ತ ಶಾಸಕ ತನ್ವಿರ್‌ ಸೇಠ್‌ ಅವರನ್ನೇ ಹತ್ಯೆ ಮಾಡುವ ಯತ್ನ ನಡೆಸಿದ ಎಂದು ಆಕ್ರೋಶ ಹೊರ ಹಾಕಿದರು.

ಬಿಲ ಬಿಟ್ಟು ಹೊರ ಬಂದಿವೆ 
ನಮ್ಮ ಸರಕಾರದ ಅವಧಿಯಲ್ಲಿ ಇಲಿಯಂತೆ ಬಾಲ ಮುದರಿ ಬಿಲ ಸೇರದ್ದವರು ಇಂದು ಹುಲಿಗಳಂತೆ ಬಿಲದಿಂದ ಆಚೆ ಬಂದು ದುಷ್ಕೃತ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಸರಕಾರದ ಮನಸ್ಥಿತಿ ಇದಕ್ಕೆ ಕಾರಣ. ಉಗ್ರರು ಮತ್ತು ದೇಶದ್ರೋಹಿಗಳ ಪರ ಸಹಾನುಭೂತಿ ಹೊಂದಿರುವ ಕಾಂಗ್ರೆಸ್‌ ಮನಸ್ಥಿತಿ ದೇಶಕ್ಕೆ ಗಂಡಾಂತರ ತರಲಿದೆ. ಕೇವಲ 9 ತಿಂಗಳಲ್ಲೇ ಸರಕಾರ ಥೂ ಛೀ ಅನ್ನಿಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ಸರಕಾರವನ್ನು ಜನತೆ ಕಂಡಿರಲಿಲ್ಲ ಎಂದರು.

ಸರಕಾರ ಸತ್ತಂತಿದೆ. ಈ ರೀತಿ ಆಡಳಿತ ನಡೆಸುವುದಕ್ಕಿಂತ ರಾಜೀನಾಮೆ ನೀಡಿ ಮನೆಗೆ ಹೋಗುವುದು ಎಷ್ಟೋ ಮೇಲು. ಬ್ರಾಂಡ್‌  ಬೆಂಗಳೂರನ್ನು ಬಾಂಬ್‌ ಬೆಂಗಳೂರು ಮಾಡಬೇಡಿ ಅನ್ನುವ ಹೇಳಿಕೆಗೆ ಡಿಕೆಶಿ ಕಾಮಾನ್‌ಸೆನ್ಸ್‌ ಇಲ್ಲ ಎಂದು ಪ್ರತಿಕ್ರಿಯೆ ನೀಡಿರುವುದನ್ನು ಗಮನಿಸಿದ್ದೇನೆ, ಬಾಂಬ್‌ ಹಾಕಿರುವುದು ಬೆಂಗಳೂರಿನಲ್ಲೋ, ಮುಂಬಾಯಿಯಲ್ಲೊ? ಕಾನೂನು ಸುವ್ಯವಸ್ಥೆ ಸಹಿತ ಎಲ್ಲ ಮಾನದಂಡಗಳು ಸಮರ್ಪಕವಾಗಿ ಇದ್ದಾಗ ಅದನ್ನು ಬ್ರಾಂಡ್‌ ಬೆಂಗಳೂರು ಅನ್ನಬಹುದು ಎಂದು ಲೇವಡಿ ಮಾಡಿದರು.

ನೇಣು ಹಾಕಿ, ಅಡ್ಡ ಬರುವುದಿಲ್ಲ 
ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಘಟನೆ ಹಿಂದೆ ಬಿಜೆಪಿಯವರಿದ್ದಾರೆ ಎಂದು ನೀಡಿರುವ ಹೇಳಿಕೆಗೆ ತೀಷ್ಣ ಪ್ರತಿಕ್ರಿಯೆ ನೀಡಿ, “ಪಾಕ್‌ ಪರ ಘೋಷಣೆ ಕೂಗಿದ ಮತ್ತು ಬಾಂಬ್‌ ಇಟ್ಟವರನ್ನು ಗುಂಡಿಕ್ಕಿ ಕೊಂದು ಹಾಕಿ ” ಎಂದು ಘಟನೆ  ನಡೆದ ತಕ್ಷಣ ಹೇಳಿಕೆ ನೀಡಿದ್ದೇವೆ. ಅದು ಯಾವ ಪಕ್ಷದವರೇ ಆಗಿರಲಿ ನೇಣು ಹಾಕಲಿ ಅಥವಾ ಗುಂಡಿಕ್ಕಿ ಕೊಂದು ಹಾಕಲಿ. ಈ ರೀತಿ ಹೇಳುವ ಧೈರ್ಯ ಕಾಂಗ್ರೆಸ್‌ ಸಚಿವರಿಗೆ, ನಾಯಕರಿಗೆ ಇದೆಯೇ ಎಂದು ಪ್ರಶ್ನಿಸಿದರು.

ದೇಶ ವಿದ್ರೋಹಿ ಘಟನೆಗಳು ನಡೆದಾಗಲೆಲ್ಲಾ ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡು ಕುಳಿತುಕೊಳ್ಳುವ ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದೂ ಅಶೋಕ್‌ ತಿರುಗೇಟು ನೀಡಿದರು.

Trending News